ಕಲಬುರಗಿ : ಕರ್ನಾಟಕವನ್ನ ಹಸಿವು ಮುಕ್ತ ರಾಜ್ಯ ಮಾಡೋದೆ ನಮ್ಮ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಲಬುರ್ಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಕ್ಕಿ ಕೊಡುವ ಕೆಲಸ ಮಾಡಿಲ್ಲ. ಅದಕ್ಕೆ ಐದು ಕೆಜಿ ಅಕ್ಕಿ ಕೊಟ್ಟು, ಐದು ಕೆಜಿ ಅಕ್ಕಿಯ ಹಣವನ್ನ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಹಿಂದೆ ಏಳು ಕೆಜಿ ಅಕ್ಕಿ ಕೊಡ್ತಾ ಇದ್ದೆ. ಬಿಜೆಯವರು ಅಧಿಕಾರಕ್ಕೆ ಬಂದ ಮೇಲೆ ಐದು ಕೆಜಿ ಇಳಿಸಿದ್ರು. ನಾನು ಬಸವರಾಜ ಬೊಮ್ಮಾಯಿಗೆ ಕೇಳಿದ್ರೆ, ನಮ್ಮ ಬಳಿ ದುಡ್ಡು ಇಲ್ಲ ಅಂತ ಹೇಳಿದ್ರು. ಆದ್ರೆ, ವಿಧಾನಸಭೆ ಚುನಾವಣೆ ವೇಳೆ ನಾವು ಅಧಿಕಾರಕ್ಕೆ ಬಂದ್ರೆ 10 ಕೆಜಿ ಅಕ್ಕಿ ಉಚಿತವಾಗಿ ಕೊಡ್ತಿನಿ ಅಂತ ಹೇಳಿದ್ದೆವು. ಅದರಂತೆ ನಡೆದುಕೊಂಡಿದ್ದೇವೆ ಎಂದು ಹೇಳಿದರು.
2,000 ಸಾವಿರ ಕೊಡುತ್ತಿದ್ದೇವೆ
ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾವು ಸೇರಿ ಗೃಹಜ್ಯೋತಿ ಜಾರಿಗೆ ಮಾಡಿದ್ದೇವೆ. ಗೃಹಲಕ್ಷ್ಮಿ ಯೋಜನೆ ಮೂಲಕ ಯಜಮಾನಿಗೆ ತಿಂಗಳಿಗೆ 2,000 ಸಾವಿರ ರೂ. ಕೊಡುತ್ತಿದ್ದೇವೆ. 1.21 ಕೋಟಿ ಮಹಿಳೆಯರಿಗೆ ಈ ಯೋಜನೆ ತಲುಪಿದೆ. ಯುವನಿಧಿ ಎನ್ನುವ ಯೋಜನೆಯನ್ನ ಯುವಕರಿಗೆ ಕೊಟ್ಟಿದ್ದೇವೆ. ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಎಂದರು.
68 ಸಾವಿರ ಕೋಟಿ ಹಣ ಮೀಸಲು
ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿಯರು ನಡೆಯುತ್ತಿದ್ದಾರಾ..? ಮೋದಿ ಹಾಗೂ ಬಿಜೆಪಿ ಬರೀ ಸುಳ್ಳು ಹೇಳುತ್ತಾರೆ. ಐದು ಗ್ಯಾರಂಟಿ ಜಾರಿ ಮಾಡಿದ್ರೆ, ರಾಜ್ಯ ಆರ್ಥಿಕವಾಗಿ ದಿವಾಳಿ ಆಗುತ್ತೆ ಅಂತ ಹೇಳಿದ್ರು. 36 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ. 68 ಸಾವಿರ ಕೋಟಿ ಹಣವನ್ನ ಅಭಿವೃದ್ಧಿ ಕೆಲಸಗಳಿಗೆ ಇಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.