ಬೆಂಗಳೂರು : ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೇಹಾ ಹತ್ಯೆ ಪ್ರಕರಣವನ್ನ ಸಿಐಡಿಗೆ ಒಪ್ಪಿಸಿದ್ದೇವೆ. ಸಮಯ ಕೂಡ ನಿಗದಿ ಮಾಡಿದ್ದೇವೆ. ಈಗಾಗಲೇ ಸಿಐಡಿ ಟೀಂ ಅಲ್ಲಿಗೆ ಹೋಗಿ ತನಿಖೆಯನ್ನು ಮಾಡ್ತಿದೆ. ಹತ್ತು ದಿನದಲ್ಲಿ ವರದಿ ನೀಡಲು ಗಡುವು ಸಹ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಸಿಇಟಿ ಪರೀಕ್ಷೆ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಸಂಪೂರ್ಣ ಮಾಹಿತಿ ಇಲ್ಲ. ಗೊಂದಲ ಇಲ್ಲದೇ ಪರೀಕ್ಷೆ ನಡೆಸಬೇಕು. ಇದರಲ್ಲಿ ಮಕ್ಕಳ ಭವಿಷ್ಯ ಇದೆ. ಮಾರ್ಕ್ಸ್ ಹೆಚ್ಚು ಪಡೆದ್ರೆ ಅವರಿಗೆ ಅನೇಕ ಅವಕಾಶ ಸಿಗಲಿದೆ. ಮೆಡಿಕಲ್, ಡೆಂಟಲ್ ಇತರೆ ಬೇರೆ ಅವಕಾಶ ಸಿಗಲಿದೆ. ಯಾವುದೇ ಗೊಂದಲ ಇದ್ದರೂ ಸರಿಪಡಿಸಬೇಕು. ಒಳ್ಳೆಯ ಸಂಸ್ಥೆ ಬೆಳೆಸಿದ್ದೇವೆ. ಅದನ್ನ ಸರಿಯಾಗಿ ನಡೆಸಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ.
296 ತಾಲ್ಲೂಕು ಬರ ಎಂದು ಘೋಷಣೆ
ಕರ್ನಾಟಕದ ಇತಿಹಾಸದಲ್ಲಿ ಇಷ್ಟು ಭೀಕರ ಬರಗಾಲ ಬಂದಿರಲಿಲ್ಲ. 296 ತಾಲ್ಲೂಕು ಬರ ಎಂದು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರ, ರಾಜ್ಯಕ್ಕೆ ಸಹಾಯ ಹಸ್ತ ನೀಡಬೇಕು. ಒಕ್ಕೂಟದ ವ್ಯವಸ್ಥೆಯಲ್ಲಿ ಆಡಳಿತ ಮಾಡುವಾಗ ಅಪೇಕ್ಷೆ ಇರಲಿದೆ. ಅಂತ ಸಂದರ್ಭದಲ್ಲಿ ಮನವಿ ಮಾಡುವಾಗ ಅವರು ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ.
ಅವರು 5 ಸಾವಿರ ಕೋಟಿ ಆದ್ರೂ ಕೊಡ್ಬೇಕಿತ್ತು
ಬರ ಪರಿಹಾರವಾಗಿ ಸರ್ಕಾರದ ಬಳಿ 18 ಸಾವಿರ ಕೋಟಿ ಕೇಳಿದ್ದೆವು. ಆದ್ರೆ, ಅವರು 5 ಸಾವಿರ ಕೋಟಿ ಆದ್ರೂ ಕೊಡ್ತೀವಿ ಅಂತ ಹೇಳಬಹುದಿತ್ತು. ಕೇಂದ್ರದ ವಿರುದ್ಧ ದೆಹಲಿಗೆ ಹೋಗಿ ಪ್ರತಿಭಟನೆ ಕೂಡ ಮಾಡಿದ್ದೆವು. ಒಕ್ಕೂಟ ವ್ಯವಸ್ಥೆಯಲ್ಲಿ ಹಾಳು ಮಾಡುವ ಕೆಲಸ ಆಗ್ತಿದೆ. ಕಾನೂನು ಚೌಕಟ್ಟಿನಲ್ಲಿ ಹಣ ಬಿಡುಗಡೆ ಮಾಡಲಿ ಎಂದು ಪರಮೇಶ್ವರ್ ಆಕ್ರೋಶ ಹೊರಹಾಕಿದ್ದಾರೆ.