ಬಳ್ಳಾರಿ : ನಾನು ಕಳೆದು ಹೋಗಬಾರದು ಅಂತ ಪಾರ್ಟಿ ಅವಕಾಶ ಕೊಟ್ಟಿದೆ. ನಾನು ಸೋತಿದ್ದಕ್ಕೆ ಎಲ್ಲರಿಗೂ ಅನುಕಂಪ ಇದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತಿದ್ದೆ. ಆದರೂ ಕೂಡ ಪಾರ್ಟಿ ನನಗೆ ಅವಕಾಶ ಕೊಟ್ಟಿದೆ. ಜನಾರ್ಧನ ರೆಡ್ಡಿಯವರು ಕೂಡ ನಮಗೆ ಒಟ್ಟಾಗಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ 400 ಸ್ಥಾನ ಗೆಲ್ಲುವ ಗುರಿ ಹೊಂದಿದ್ದಾರೆ. ಅದರಲ್ಲಿ ಬಳ್ಳಾರಿ ಕ್ಷೇತ್ರವೂ ಒಂದು. ಈಗಾಗಲೇ ಎಲ್ಲ ಕಡೆ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆ. ನಾಳೆಯುಂದ ಎರಡನೇ ಸುತ್ತಿನ ಪ್ರಚಾರ ಆರಂಭಿಸುವೆ. ಎಲ್ಲರೂ ಒಗ್ಗಟ್ಟಿನಿಂದ ನಾವು ಗೆಲ್ಲುತ್ತೇವೆ. ಮೋದಿ ಅಲೆಯಿಂದ, ಯಡಿಯೂರಪ್ಪ ಶಕ್ತಿಯಿಂದ ನಮಗೆ ಗೆಲುವಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಒಂದಾಗಿರೋದು ಅವ್ರಿಗೆ ಭಯ ಹುಟ್ಟಿಸಿದೆ
ಜನಾರ್ಧನ್ ರೆಡ್ಡಿಯೇ ಶ್ರೀರಾಮುಲು ಸೋಲಿಸ್ತಾರೆ ಎಂದಿದ್ದ ಭೀಮಾನಾಯ್ಕ್ ಹೇಳಿಕೆಗೆ ಶ್ರೀರಾಮುಲು ತಿರುಗೇಟು ನೀಡಿದರು. ಯಾರು ಯಾರನ್ನು ಮನೆಗೆ ಕಳುಹಿಸ್ತಾರೆ ಗೊತ್ತಾಗುತ್ತೆ. ಇಂಡಿಯಾ ಒಕ್ಕೂಟ ಈಗಾಗಲೇ ಸೋತು ಹೋಗಿದೆ. ನಾವೆಲ್ಲ ಒಡೆದು ಹೋದ್ರೆ ಗೆಲ್ತೀವಿ ಅನ್ನೋ ಭ್ರಮೆ ಇತ್ತು. ಈಗ ನಾವು ಒಂದಾಗಿರೋದು ಅವರಿಗೆ ಭಯ ಹುಟ್ಟಿಸಿದೆ. ಮತಿ ಭ್ರಮಣೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದರು.