Saturday, April 27, 2024

ಕುಮಾರಸ್ವಾಮಿ ಗಿಮಿಕ್ ರಾಜಕಾರಣಿ : ಶಾಸಕ ಬಾಲಕೃಷ್ಣ

ರಾಮನಗರ : ಕಾಂಗ್ರೆಸ್​ನವರು ದೇವೇಗೌಡರು ಬದುಕಿಗೆ ವಿಷ ಹಾಕ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ತಿರುಗೇಟು ಕೊಟ್ಟರು.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಯಾವಾಗಲೂ ಗಿಮಿಕ್ ರಾಜಕಾರಣಿ. ಈ ರೀತಿ ವಿರೋಧಿಗಳ ಮೇಲೆ ಅಪಪ್ರಚಾರ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳಲು ಮಾತನಾಡ್ತಾರೆ ಎಂದು ಕುಟುಕಿದರು.

ಚುನಾವಣೆ ಅಂದಮೇಲೆ ಎಲ್ಲವೂ ಇರುತ್ತದೆ. ಚಾಣುಕ್ಯನ ತಂತ್ರ ಕುಮಾರಸ್ವಾಮಿಗೆ ಹೆಚ್ಚು ಗೊತ್ತು. ಅದನ್ನು ಇಲ್ಲಿ ಉಪಯೋಗಿಸಿಕೊಳ್ತಿದ್ದಾರೆ. ಅನುಕಂಪದ ಅಲೆ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಇದು ಇನ್ಮುಂದೆ ನಡೆಯಲ್ಲ ಎಂದು ಚಾಟಿ ಬೀಸಿದರು.

ಮಂಜುನಾಥ್ ಸೋಲನ್ನು ಒಪ್ಪಿಕೊಂಡಿದ್ದಾರೆ

ಚುನಾವಣೆಗೆ ಪ್ಯಾರ ಮಿಲಿಟರಿ ಕರೆಸಬೇಕು ಎಂಬ ಕುಮಾರಸ್ವಾಮಿ ಹೇಳಿಕೆಗೆ, ಮೈತ್ರಿ ಅಭ್ಯರ್ಥಿ ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂಬುದು ಅರ್ಥ ಆಗ್ತಿದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕಂಟ್ರೋಲ್​ನಲ್ಲಿ ಇದೆ. ಆಯೋಗದ ಮೇಲೆ ದೂರುವವರು ಸೋಲನ್ನು ಒಪ್ಪಿಕೊಂಡಿದ್ದಾರೆ ಅಂತ ಅರ್ಥ ಎಂದು ಛೇಡಿಸಿದರು.

ನಾವು ಅಭಿವೃದ್ಧಿಗಾಗಿ ವೋಟು ಕೇಳುತ್ತಿದ್ದೇವೆ

ಸೋತಮೇಲೆ ದುಡ್ಡು ಹಂಚಿದ್ರು, ಸೀರೆ, ಗಿಫ್ಟ್ ಕಾರ್ಡ್ ಹಂಚಿ ಗೆದ್ರು ಅಂತಾರೆ. ಎಷ್ಟೋ ಜನ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ಅವರು ದಡ್ಡರಲ್ಲ, ಎಲ್ಲರೂ ಪ್ರಜ್ಞಾವಂತರು. ನಾವು ಅವರ ಮನವೊಲಿಸಿ ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ನಾವು ಅಭಿವೃದ್ಧಿಗಾಗಿ ಮತ ಕೇಳುತ್ತಿದ್ದೇವೆ ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿದರು.

RELATED ARTICLES

Related Articles

TRENDING ARTICLES