Saturday, July 27, 2024

ಲೋಕಸಭಾ ಚುನಾವಣೆ: ಆಪ್ತರ ಜೊತೆ ಸುಮಲತಾ ಇಂದು ಮಹತ್ವದ ಸಭೆ

ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದ್ದು, ರಾಜ್ಯದಲ್ಲಿ ಚುನಾವಣೆ ಚಟುವಟಿಕೆಗಳು ಗರಿಗೆದರಿದೆ, ಮಂಡ್ಯ ಜಿಲ್ಲೆಯ ಟಿಕೆಟ್ ಕದನದಲ್ಲಿ ಹಾಲಿ ಸಂಸದರಾದ ಸುಮಲತಾ ಹಾಗು ಜೆಡಿಎಸ್​ ನ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೈಕಮಾಂಡ್​ ಮುಂದೆ ಗಟ್ಟಿಯಾಗಿ ತಮ್ಮ ಪರವಾಗಿ ಬೇಡಿಕೆ ಮಂಡಿಸಿದ್ದಾರೆ.

ಸಂಸದೆ ಸುಮಲತಾ ಅಂಬರೀಷ್ ಅವರ ಮುಂದಿನ ರಾಜಕೀಯ ನಡೆ ಕುತೂಹಲವಾಗಿದೆ. ಇತ್ತ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲು ಸುಮಲತಾ ಸುತಾರಂ ತಯಾರಿಲ್ಲ, ಅತ್ತ ಜೆಡಿಎಸ್ ಟಿಕೆಟ್ ಗಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಶತಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ರಾಜಕೀಯ ಬೆಳವಣಿಗೆಗಳ ನಡುವೆ ಇಂದು ಸಂಸದೆ ಸುಮಲತಾ ಅಂಬರೀಶ್ ಅವರು ಮಹತ್ವದ ಸಭೆಯನ್ನು ನಡೆಸಲಿದ್ದಾರೆ.

ಇದನ್ನೂ ಓದಿ: ಮುಳ್ಳಯ್ಯನ ಗಿರಿಯಲ್ಲಿ ಕಾಡ್ಗಿಚ್ಚು: ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶ

ಸುಮಲತಾ ಅವರು ಮಂಡ್ಯ ಬಿಟ್ಟು ಹೋಗುವುದಿಲ್ಲ, ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿಯೇ ಸ್ಪರ್ಧಿಸಲಿದ್ದಾರೆ ಎಂದು ಅವರ ಆಪ್ತ ಹನಕೆರೆ ಶಶಿಕುಮಾರ್ ಹೇಳಿದ್ದಾರೆ. ಆಪ್ತರ ಹೇಳಿಕೆ ಬೆನ್ನಲ್ಲೇ ಇಂದು ಸುಮಲತಾ ಅವರು ಬೆಂಗಳೂರಿನ ಜೆ ಪಿ ನಗರದ ತಮ್ಮ ನಿವಾಸದಲ್ಲಿ ಸಾಯಂಕಾಲ ಮಹತ್ವದ ಸಭೆ ಕರೆದಿದ್ದಾರೆ. ಸಭೆಯಲ್ಲಿ ಸುಮಲತಾ ಆಪ್ತರು ಹಾಗೂ ಮುಖಂಡರು ಭಾಗಿಯಾಗಲಿದ್ದಾರೆ.

 

ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ತಮಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಮನವನ್ನು ಹೇಗೆ ಒಲಿಸಬೇಕು, ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಏನು ಮಾಡಬೇಕೆಂದು ಸಂಸದೆ ಆಪ್ತರ ಜೊತೆ ಚರ್ಚೆ ನಡೆಸಲಿದ್ದಾರೆ. ಈ ಸಭೆ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೂ ಸಹ ಗ್ರಾಸವಾಗಿದೆ.

ಸುಮಲತಾ ಅವರ ನಡೆ ದಳಪತಿಗಳಿಗೆ ತಲೆನೋವಾಗಿದ್ದು, ಬಿಜೆಪಿ ಹೈಕಮಾಂಡ್‌ಗೂ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ.

RELATED ARTICLES

Related Articles

TRENDING ARTICLES