ಶಿವಮೊಗ್ಗ : ಬಿಜೆಪಿಯವರು ಬದುಕಿನ ಮೇಲೆ ರಾಜಕಾರಣ ಮಾಡುವುದಿಲ್ಲ, ಭಾವನೆಗಳು, ಧರ್ಮ, ದೇವರು, ದೇವಸ್ಥಾನ ಅಂತ ರಾಜಕಾರಣ ಮಾಡುತ್ತಾರೆ ಎಂದು ಬಿಜೆಪಿ ವಿರುದ್ದ ಕೆಪಿಸಿಸಿ ಅಧ್ಯಕ್ಷ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದರು.
ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದ 5 ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಮನೆಗಳು ಬೆಳಕಿನಿಂದ ತುಂಬಲಿಕ್ಕೆ ಗೃಹಲಕ್ಷ್ಮಿ ಯೋಜನೆಯಡಿ 1ಕೋಟಿ 10ಲಕ್ಷ ಗೃಹಿಣಿಯರಿಗೆ ನೇರವಾಗಿ ಯಾರಿಗೂ ಕೂಡ ಒಂದು ರೂಪಾಯಿ ಲಂಚ ನೀಡದೆ ನಿಮ್ಮ ಖಾತೆಗಳಿಗೆ ಹಾಕುವ ಕಾರ್ಯ ನಡೆಯುತ್ತಿರುವುದು ಇದು ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಒಂದು ಇತಿಹಾಸ ಎಂದರು.
ಇದನ್ನೂ ಓದಿ:ಡಿಬಾಸ್ ‘ತಗಡು’ ಪದ ಬಳಕೆಗೆ ಬಹುಭಾಷಾ ನಟ ಪ್ರಕಾಶ್ ರೈ ಪ್ರತಿಕ್ರಿಯೆ!
ಬಿಜೆಪಿಯವರು ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ರಾಜಕಾರಣ ಮಾಡುವುದಿಲ್ಲ, ಭಾವನೆಗಳ ಮೇಲೆ ಧರ್ಮ, ದೇವರು, ದೇವಸ್ಥಾನ ಅಂತ ರಾಜಕಾರಣ ಮಾಡುತ್ತಾರೆ, ದೇವಸ್ಥಾನ ಯಾರ ಆಸ್ತಿಯೂ ಅಲ್ಲ, ಭಗವಂತನಿಗೂ ಭಕ್ತನಿಗೂ ವ್ಯವಹಾರ ನಡೆಯುವ ಸ್ಥಳ. 5 ಗ್ಯಾರೆಂಟಿಗಳನ್ನು ನಾವು ಜಾತಿ ಮೇಲೆ ಕೊಟ್ಟಿಲ್ಲ ನೀತಿ ಮೇಲೆ ಕೊಟ್ಟಿದ್ದೇವೆ, ಒಂದೇ ವರ್ಗದ ಜನರಿಗೆ ಈ ಗ್ಯಾರೆಂಟಿ ಕೊಟ್ಟಿಲ್ಲ ಎಲ್ಲಾ ವರ್ಗದ ಜನರಿಗೂ ಸೇರಿ ಈ ಗ್ಯಾರೆಂಟಿ ಕೊಟ್ಟಿದ್ದೇವೆ ಎಂದರು.
ಯಡಿಯೂರಪ್ಪನವರು ಎರಡು ಮೂರು ಬಾರಿ ಮುಖ್ಯಮಂತ್ರಿಗಳಾಗಿದ್ದವರು ನಿಮ್ಮ ಅವಧಿಯಲ್ಲಿ ಬಡವರು ಬದುಕು ಕಟ್ಟಿಕೊಳ್ಳುಲು ಕೊಟ್ಟ ಕಾರ್ಯಕ್ರಮ ಯಾವುದು? ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಕೊಟ್ಟಿದ್ದು ಒಂದು ಸೀರೆ, ಒಂದು ಸೈಕಲ್ ಅಷ್ಟೇ. ಎಲ್ಲೋಯ್ತು ಆ ಸೈಕಲ್.? ಎಲ್ಲೋಯ್ತು ಆ ಸೀರೆ.? ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಮಾತಿದೆ ಆದರೆ, ಇವರು ಈಗ ಮೋದಿ ಗ್ಯಾರಂಟಿ, ಮೋದಿನೇ ಗ್ಯಾರಂಟಿ ಅಂತಿದ್ದಾರೆ ಎಂದರು.