ಬೆಂಗಳೂರು : ಕಾಂಗ್ರೆಸ್ ಸರ್ಕಾರ ದಲಿತರ ಮೂಲಕವೇ ದಲಿತರ ಸಮಾಧಿ ಕಟ್ಟುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ದೂರಿದರು.
ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ SCS-TPTSP ಹಣ ಬಳಕೆ ವಿಚಾರವನ್ನ ಮೇಲ್ಮನೆಯಲ್ಲಿ ಅವರು ಪ್ರಸ್ತಾಪಿಸಿದರು.
ಕಳೆದ ಬಾರಿ ಪ್ರಶ್ನೆ ಕೇಳಿದಾಗ ಗ್ಯಾರಂಟಿಗಳಿಗೆ ಹಣ ಬಳಕೆ ಮಾಡಿಲ್ಲ ಎಂದು ಹೇಳಿದ್ದರು. ಈಗ ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಗ್ಯಾರಂಟಿಗಳಿಗೆ ಹಣ ಘೋಷಣೆ ನಿಮ್ಮ ತೆವಲಿಗೆ ಘೋಷಣೆ ಮಾಡಿದ್ದೀರಾ?ಎಂದು ಪ್ರಶ್ನೆ ಮಾಡಿದರು.
ಅಳಿಯ ಯಾರು? ಮಗಳ ಗಂಡ ಯಾರು?
ಸಚಿವ ಮಹದೇವಪ್ಪ ನಿಮಗೆ ಅಳಿಯ ಯಾರು? ಮಗಳ ಗಂಡ ಯಾರು? ಅಂತ ಗೊತ್ತಿಲ್ಲ ಅನಿಸುತ್ತದೆ. ಮಹದೇವಪ್ಪ ಅವರ ಪರಮಾತ್ಮ ಆಡಿಸಿದಂತೆ ಆಡುವವರು. ನಿಮ್ಮ ಪರಮಾತ್ಮ ಯಾರು ಎಂದು ನಮಗೆ ಗೊತ್ತಿದೆ. SCS-TPTSP ಯೋಜನೆಯಡಿ ಮೀಸಲಾದ ಅನುದಾನದಲ್ಲಿ ಗ್ಯಾರಂಟಿಗಳಿಗೆ ಬಳಕೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಇದು ದಲಿತರಿಗೆ ಮಾಡಿದ ಅನ್ಯಾಯ
ಪ್ರತಿಯೊಂದು ಗ್ಯಾರಂಟಿಗಳಲ್ಲಿ ಎಸ್ಸಿ, ಎಸ್ಟಿ ಫಲಾನುಭವಿಗಳ ಸಂಖ್ಯೆ ಎಷ್ಟು? ಆ ಫಲಾನುಭವಿಗಳಿಗೆ ನೀಡಲಾದ ವೆಚ್ಚ ಎಷ್ಟು? ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಕೆ ಮಾಡಿಕೊಂಡಿದ್ದಲ್ಲಿ, ಒಂದು ವೇಳೆ ಎಸ್ಸಿ, ಎಸ್ಟಿ ಫಲಾನುಭವಿಗಳ ಮಾಹಿತಿ ಇಲ್ಲದೆ ಹೋದರೆ ಹಣ ದುರ್ಬಳಕೆ ಮಾಡಿಕೊಂಡಂತೆ ಅಲ್ಲವೇ? ಇದು ದಲಿತರಿಗೆ ಮಾಡಿದ ಅನ್ಯಾಯ ಎಂದ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.