Friday, September 20, 2024

ಆಪರೇಷನ್ ಹಸ್ತಕ್ಕೆ ಹೆಚ್.ಡಿ.ಕುಮಾರಸ್ವಾಮಿ ಕೌಂಟರ್

ಹಾಸನ: ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ನಾಯಕರು ಪ್ರತಿಪಕ್ಷಗಳನ್ನು ಹೆದರಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸೊಪ್ಪು ಹಾಕುವ ಜಾಯಮಾನ ನಮ್ಮದಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್​ಗೆ ಕೌಂಟರ್​ ಕೊಟ್ಟರು.

ಹಾಸನದಲ್ಲಿ ಖಾಸಗಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಆಪರೇಷನ್‌ ಹಸ್ತ ಮಾಡುತ್ತಿರುವವರಿಗೆ ಈಗಾಗಲೇ ಹೇಳಿದ್ದೇನೆ. ನಮ್ಮ ಪಕ್ಷದಿಂದ ಯಾರಾದರೂ ಬರುವವರು ಇದ್ದರೆ ಮೈಸೂರು ಪೇಟ ಹಾಕಿ ಶಾಲು ಹೊದಿಸಿ ಕರೆದುಕೊಂಡು ಹೋಗಿ ಅಂದಿದ್ದೀನಿ ಎಂದು ಟಾಂಗ್‌ ನೀಡಿದ ಅವರು; ನಿನ್ನೆ, ಮೊನ್ನೆ ಗೆದ್ದಂತಹ ಕಾಂಗ್ರೆಸ್ ಎಂಎಲ್‌ಎಗಳು ಇನ್ನು ಕ್ಷೇತ್ರವನ್ನೇ ಸುತ್ತಿಲ್ಲ. ಅಂತಹವರು ಸಹ ಇವತ್ತು ಜೆಡಿಎಸ್‌ನಿಂದ ಹತ್ತು, ಬಿಜೆಪಿಯಿಂದ ಹತ್ತು ಜನ ಶಾಸಕರು ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಕರೆದುಕೊಂದು ಹೋಗಿ ಎಂದು ಹೇಳಿದ್ದೇನೆ ಎಂದರು ಅವರು.

ಇದನ್ನೂ ಓದಿ: ಬೇಕಂತಲೆ ಕ್ಯಾಂಟರ್ ಲಾರಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು : ಘಟನೆ ಸಿಸಿಟಿಯಲ್ಲಿ ಸೆರೆ

ಬೇರೆ ಪಕ್ಷದ ಶಾಸಕರನ್ನು ಕಾಂಗ್ರೆಸ್ ಬಹಳ ಉಮೇದಿನಿಂದ ಸೆಳೆಯುತ್ತಿದೆ. ಸೆಲೀತಾ ಇರಲಿ, ಬೇರೆ ಪಕ್ಷದ ಶಾಸಕರನ್ನು ಸೆಳೆದು ಹಿಂದೆಲ್ಲಾ ಏನೇನಾಗಿದೆ ಎನ್ನುವುದು ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು ಅವರು.

1999ರಲ್ಲಿ ಎಸ್.ಎಂ.ಕೃಷ್ಣ ಅವರು ನಮ್ಮಿಂದಲೇ ಐದು ಜನ, ಬಿಜೆಪಿಯಿಂದ ಹತ್ತು ಜನರನ್ನು ಕರೆದುಕೊಂಡು ‌ಹೋದರು. 2004ರಲ್ಲಿ ಎಲ್ಲಿ ಬಂದು ನಿಂತರು, 120-130 ಸೀಟುಗಳಿಂದ 62ಕ್ಕೆ ಕುಸಿದರು. ನಂತರ ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಐದು ವರ್ಷ ಅಧಿಕಾರ ನಡೆಸಿದರು. ನಂತರ 40 ಸ್ಥಾನಕ್ಕೆ ಬಂದರು. ಇದೇ ಸಿದ್ದರಾಮಯ್ಯ ಅವರು 2013-2018ರಲ್ಲಿ ನಮ್ಮ ಪಕ್ಷದ‌ ಏಳೆಂಟು ಜನರನ್ನು ಕರೆದುಕೊಂಡು ಹೋದರು. ಕೊನೆಗೆ 78 ಸೀಟಿಗೆ ಬಂದು ನಿಂತರು. ಸರಕಾರ ಬಂದಾಗ ಇವೆಲ್ಲಾ ನಡೆಯುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ನಿಷ್ಠೆ ಅನ್ನೋದು ಯಾರಿಗೂ ಇಲ್ಲಾ. ಇವತ್ತು ಯಾವುದೇ ಪಕ್ಷದಲ್ಲೂ ನಿಷ್ಠೆ ಅನ್ನೋದು ಉಳಿದಿಲ್ಲ. ನಮಗೆ ತಕ್ಷಣಕ್ಕೆ ಏನು ಸಿಗುತ್ತೆ ಅನ್ನೋದು ಎಲ್ಲರಿಗೂ ಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು ಮಾಜಿ ಮುಖ್ಯಮಂತ್ರಿಗಳು.

ಲೋಕಸಭೆ ಚುನಾವಣೆಯಲ್ಲಿ ಇಪ್ಪತ್ತು ಸೀಟು ಗೆಲ್ಲಬೇಕಾದರೆ ಎಲ್ಲರನ್ನೂ ತುಂಬಿಕೊಳ್ಳಬೇಕು. ಬಸ್ಸನ್ನು ಸಂಪೂರ್ಣ ಓವರ್ ಲೋಡ್ ಮಾಡಿಕೊಂಡು ಮುಂದಿನ ನಿಲ್ದಾಣದಲ್ಲಿ‌ ಇಳಿಯದಂತೆ ಬಿಗಿ ಮಾಡಿಕೊಳ್ಳಬೇಕು ಅಂತ ದಿನ ಹೇಳುತ್ತಿದ್ದಾರೆ ಆದರೆ ಮುಂದೆ ಏನೇನಾಗುತ್ತದೆ ಎನ್ನುವುದನ್ನು ಕಾಡು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು ಅವರು.

RELATED ARTICLES

Related Articles

TRENDING ARTICLES