Monday, February 24, 2025

ಅಕ್ಕಿ ಬದಲು ದುಡ್ಡು, ಸರ್ಕಾರ ಬೊಕ್ಕಸಕ್ಕೆ 123 ಕೋಟಿ ಉಳಿತಾಯ!

ಬೆಂಗಳೂರು : ರಾಜ್ಯ ಸರ್ಕಾರ ಬಿಪಿಎಲ್ (BPL) ಕಾರ್ಡ್‌ ಫಲಾನುಭವಿಗಳಿಗೆ ಅಕ್ಕಿ ಬದಲು ದುಡ್ಡು ಕೊಡಲು ತೀರ್ಮಾನಿಸಿದೆ. ಈ ತಿಂಗಳಿಂದ‌ಲೇ ಆಹಾರ ಇಲಾಖೆ ಪಡಿತರದಾರರಿಗೆ ಅಕ್ಕಿಯ ದುಡ್ಡು ಅಕೌಂಟಿಗೆ ಹಾಕಲು ಸಿದ್ದವಾಗಿದೆ.

ಅಕ್ಕಿ ಬದಲು ದುಡ್ಡು ಕೊಡುವುದರಿಂದ ರಾಜ್ಯ ಸರ್ಕಾರಕ್ಕೆ ಆಗುವ ಲಾಭವೇನು? ಇಲಾಖೆ ಜನರಿಗೆ ಹಣ ವರ್ಗಾವಣೆಗೆ ಮಾಡಿಕೊಂಡಿರೋ ಸಿದ್ದತೆಗಳೇನು? ಇಲ್ಲಿದೆ ನೋಡಿ ಮಾಹಿತಿ​​.

ಅನ್ನಭಾಗ್ಯ ಯೋಜನೆಯಡಿ‌ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ 10 ಕಿಲೋ ಅಕ್ಕಿ ಕೊಡುವುದಕ್ಕೆ‌ ಸರ್ಕಾರ ನಾನಾ ಕಸರತ್ತು‌ ಮಾಡಿತ್ತು. ಸಾಕಷ್ಟು ಸರ್ಕಸ್ ಮಾಡಿದ ಬಳಿಕ ಈಗ ಅಂತಿಮವಾಗಿ ಅಕ್ಕಿ ಬದಲು ದುಡ್ಡು ಕೊಡುವುದಕ್ಕೆ ತೀರ್ಮಾನಿಸಿದೆ. ಜುಲೈ ತಿಂಗಳಿಂದಲೇ ಐದು ಕಿಲೋ ಅಕ್ಕಿಯ‌ ಬದಲು ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ ಫಲಾನುಭವಿಗೆ ಪ್ರತಿ ಕಿಲೋಗೆ 34 ರೂ.ನಂತೆ ಐದು ಕಿಲೋಗೆ 170 ರೂಪಾಯಿಗಳನ್ನ‌ ಕೊಡಲಿದೆ.

6 ಲಕ್ಷ ಜನರಿಗೆ ಸಿಗಲ್ಲ ಅಕ್ಕಿ ದುಡ್ಡು

ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವ ಸಂಖ್ಯೆ 1 ಕೋಟಿ 28 ಲಕ್ಷ. ಈ ಪೈಕಿ 1 ಕೋಟಿ 22ಲಕ್ಷ‌ ಮಂದಿ ಬ್ಯಾಂಕ್‌ ಖಾತೆ ಹೊಂದಿದ್ದಾರೆ. ಅದು ಆಧಾರ್‌ಕಾರ್ಡ್‌ಗೆ ಲಿಂಕ್ ಆಗಿರೋ ಕಾರಣ ನೇರವಾಗಿ ಯಜಮಾನರ ಖಾತೆಗೆ ಸಂಪೂರ್ಣ ಹಣ ಡಿಬಿಟಿಯ ಮೂಲಕ‌‌ ಜಮೆಯಾಗಲಿದೆ. ಆದ್ರೆ ಉಳಿದ 6 ಲಕ್ಷ ಜನ ಮಾತ್ರ ತಮ್ಮ ಬಿಪಿಎಲ್ ಕಾರ್ಡ್​​​ಗೆ ಆಧಾರ್​ ಲಿಂಕ್ ಮಾಡಿಸಿಲ್ಲ. ಅವರು ಬಿಪಿಎಲ್ ಕಾರ್ಡ್​​​ಗೆ ಆಧಾರ್​ ಲಿಂಕ್‌ ಮಾಡಿಸಿದ ಕೂಡಲೇ ಅವರಿಗೂ ಹಣ ಜಮೆಯಾಗುತ್ತದೆ.

ಇದನ್ನೂ ಓದಿ : ಅಗತ್ಯಕ್ಕೆ ಅನುಗುಣವಾಗಿ ವಿದ್ಯುತ್ ಬಳಸಿ : ಸಿದ್ದರಾಮಯ್ಯ ಮನವಿ

ಸರ್ಕಾರಕ್ಕೆ 123 ಕೋಟಿ‌‌ ಲಾಭ

ಇನ್ನೂ, ಆಹಾರ ಇಲಾಖೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡೋದಕ್ಕೆ ಸಿದ್ದತೆ ಮಾಡ್ಕೊಂಡಿದೆ. ಇದೀಗ ಅಕ್ಕಿ ಬದಲು ಹಣ ಕೊಡುವುದರಿಂದ ಆಹಾರ ಇಲಾಖೆಗೆ ಪ್ರತಿ ತಿಂಗಳು 123 ಕೋಟಿ‌‌ ಹಣ ಲಾಭವಾಗಲಿದೆ. ಅಕ್ಕಿಯ ಸಾಗಣೆ ವೆಚ್ಚ, ಶೇಖರಣೆ, ಕಾರ್ಮಿಕರ ವೆಚ್ಚ ಮತ್ತು ವಿತರಣಾ ಖರ್ಚುಗಳು ಇಲಾಖೆಗೆ ಉಳಿತಾಯವಾಗಲಿದೆ.

ಒಟ್ನಲ್ಲಿ, ಆಹಾರ ಇಲಾಖೆ ಐದು ಕೆಜಿ ಅಕ್ಕಿಯ ಜೊತೆ ಹಣವನ್ನು ಬಿಪಿಎಲ್ ಕಾರ್ಡ್‌ದಾರರಿಗೆ  ವರ್ಗಾವಣೆ ಮಾಡೋದಕ್ಕೆ ಸಿದ್ದತೆ ಮಾಡ್ಕೊಂಡಿದೆ. ಆಧಾರ್​ ಕಾರ್ಡ್‌ಗೆ ಬ್ಯಾಂಕ್ ಖಾತೆ ಲಿಂಕ್‌ ಮಾಡದವರಿಗೂ ಆದಷ್ಟು ಬೇಗ ಲಿಂಕ್ ಮಾಡಲು ಸೂಚಿಸಿದೆ. ಅನ್ನಭಾಗ್ಯ ಯೋಜನೆಯ ಮೊದಲ‌ ತಿಂಗಳ ಪಡಿತರದ ಹಣ ಜುಲೈ 15ರೊಳಗಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

RELATED ARTICLES

Related Articles

TRENDING ARTICLES