Thursday, April 25, 2024

ಪ್ಲೀಸ್.. ‘ನಾನ್ ಕೊಟ್ಟ ದುಡ್ಡು ವಾಪಸ್ ಕೊಡಿ’ : ಗೋಗರಿದ ಮಾಜಿ ಸಚಿವ ನಾರಾಯಣಗೌಡ

ಗಳೂರು : ನಾನ್ ಕೊಟ್ಟ ದುಡ್ಡು ದಯಮಾಡಿ ವಾಪಸ್ ಕೊಡಿ ಎಂದು ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ಮಾಜಿ ಸಚಿವ ಕೆ.ಸಿ ನಾರಾಯಣಗೌಡ ಗೋಗರಿದಿದ್ದಾರೆ.

ಹೌದು, ಇಂಥದೊಂದು ಘಟನೆಗೆ ಸಾಕ್ಷಿಯಾದದ್ದು ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರ. ಇಲ್ಲಿಯ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ತಮ್ಮ ಮುಖಂಡರ ಬಳಿ ಮನವಿ ಮಾಡಿದ ರೀತಿ. ಈಗ ನಡೆದ ವಿಧಾನಸಭಾ ಚುನಾವಣೆಯಲ್ಲಿ ಏನಾದ್ರು ಮಾಡಿ ಗೆಲ್ಲಲೇ ಬೇಕೆಂದು ಕ್ಷೇತ್ರದ ಜನತೆಗೆ ಹಣ ಹಂಚಲು ತಮ್ಮ ಬೆಂಬಲಿಗರಿಗೆ ಲಕ್ಷ ಲಕ್ಷ ಹಣ ಕೊಟ್ಟಿದ್ರು. ಆದ್ರೆ, ಕೊಟ್ಟೋನು ಕೋಡಂಗಿ ಈಸ್ಕೊಂಡೋನು ವೀರಭದ್ರ ಅನ್ನೋ ರೀತಿಯಾಗಿದೆ ನಾರಾಯಣಗೌಡರ ಪರಿಸ್ಥಿತಿ.

ನಂಗೊತ್ತು ಚುನಾವಣೇಲಿ ನಾನ್ ಕೊಟ್ಟ ದುಡ್ಡನ್ನು ಜನ್ರಿಗೆ ಹಂಚಿಲ್ಲ. ನಾನು ಮಾಹಿತಿ ಪಡೆದುಕೊಂಡಿದ್ದೀನಿ. ಜನ್ರಿಗೆ ಹಣ ಹಂಚದೆ ನೀವೇ ಇಟ್ಕೊಂಡಿದ್ದೀರಿ. ಆ ಹಣಾನ ವಾಪಸ್ ಕೊಡಿ. ಒಂದು ಟ್ರಸ್ಟ್ ಮಾಡಿ, ಅದರಿಂದ ಜನ್ರಿಗೆ ಅನುಕೂಲವಾಗೋ ಕೆಲ್ಸ ಮಾಡೋಣ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬರೀ 5 ಲಕ್ಷ ಕೊಟ್ಟರೆ ಪರಿಹಾರ ಅಲ್ಲ : ಡಿ.ಕೆ ಶಿವಕುಮಾರ್

ಹಣ ಹಂಚದೆ ಜೇಬಿಗಿಳಿಸಿರುವ ಮುಖಂಡರು

ಇಡೀ ಕ್ಷೇತ್ರದಲ್ಲಿ ಹಣ ಹಂಚಿದ್ದೀನಿ ನಾನು ಗೆಲ್ತೀನಿ ಅಂತ ನಾರಾಯಣಗೌಡ ಖುಷಿಯಾಗಿದ್ದರು. ಆದರೆ, ಇಲ್ಲಿ ಆಗಿರೋದೆ ಬೇರೆ. ದುಡ್ಡು ಈಸ್ಕೊಂಡ ಮುಖಂಡರು ಹಣ ಹಂಚದೆ ಜೇಬಿಗಿಳಿಸಿದ್ದಾರೆ. ಅದ್ಯಾಗೋ ಏನೋ ಈ ವಿಷ್ಯ ನಾರಾಯಣಗೌಡ್ರಿಗೆ ಗೊತ್ತಾಗೋಗಿದೆ. ಅದ್ಕೆ ಅವ್ರು ಕೃತಜ್ಞತಾ ಸಭೇಲಿ ದಯಮಾಡಿ ಹಣ ವಾಪಸ್ ಕೊಡಿ. ಆ ಹಣದಲ್ಲಿ ಒಂದು ಟ್ರಸ್ಟ್ ಪ್ರಾರಂಭಿಸಿ ಜನ್ರಿಗೆ ಅನುಕೂಲ ಮಾಡುವ ಅಂತ ಮನವಿ ಮಾಡಿದ್ದಾರೆ.

ಈ ಎಲ್ಲಾ ಬೆಳವಣಿಗೆ ನೋಡಿದ್ರೆ ಈ ಬಾರಿಯ ಚುನಾವಣೇಲಿ ನಾರಾಯಣಗೌಡರಿಗೆ ನಂಬಿದೋರೆ ಕೈ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತೆ. ಒಟ್ಟಾರೆ, ಹಣ ಬಲದಿಂದ ಗೆಲ್ಲಬಹುದು ಅಂತ ತಿಳ್ಕೊಂಡೋರಿಗೆ ಅವರ ಕಡೆಯವ್ರೆ ಬುದ್ದಿ ಕಲಿಸ್ತಾರೆ ಅನ್ನೋದಂತು ಸಾಭೀತಾಗಿದೆ. ಇತ್ತ ಹಣವೂ ಹೋಯ್ತ, ಅತ್ತ ಅಧಿಕಾರವೂ ಇಲ್ಲದಂತಾಯ್ತು ಅನ್ನೋ ಪರಿಸ್ಥಿತಿ ನಾರಾಯಣಗೌಡರದ್ದಾಗಿದೆ.

RELATED ARTICLES

Related Articles

TRENDING ARTICLES