Friday, April 26, 2024

ವಿಲ್ ಪವರ್ ಇಲ್ಲದ ಸಿಎಂ ಯಾಕೆ ಬೇಕು? : ಜಗದೀಶ್ ಶೆಟ್ಟರ್ ಕಿಡಿ

ಬೆಂಗಳೂರು : ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಿ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ​​ ಬೊಮ್ಮಾಯಿ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಲ್ ಪವರ್ ಇಲ್ಲದ ಸಿಎಂ ಯಾಕೆ ಬೇಕು? ಎಂದು ​ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಜನರಿಗೆ ಬೇಸರ ಮೂಡಿಸಿದೆ. ಯೋಜನೆಗಳು ಜನರಿಗೆ ತಲುಪಲಿಲ್ಲ. ಮೀಸಲಾತಿ ಜನರಿಗೆ ತಲುಪಲಿಲ್ಲ. ಕೈಗಾರಿಕೆಗೆ ಎರಡು ಎಕರೆ ಜಮೀನು ಕೊಡಲು ಆಗಿಲ್ಲ. ಇಂಥವರು ಯಾಕೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಬೇಕು ಎಂದು ಗುಡುಗಿದ್ದಾರೆ.

ಇನ್ನು ತಮ್ಮ ಗೆಲುವು ಸಿದ್ಧ ಎಂದು ಹೇಳಿದ ಶೆಟ್ಟರ್​​, ನಾನು ಲೆಕ್ಕಾಚಾರ ಮಾಡಿದ್ದಕ್ಕಿಂತ ದ್ವಿಗುಣ ಬೆಂಬಲ ಸಿಕ್ಕಿದೆ. ಗೆಲುವಿನ ಅಂತರ ಕಳೆದ ಬಾರಿಗಿಂತ ಹೆಚ್ಚಾಗಲಿದೆ. ಹಣದ ಬಲದ ಮೇಲೆ ಗೆಲ್ಲುವುದಾದರೆ ಬಹಳಷ್ಟು ಶ್ರೀಮಂತರೇ ಗೆಲ್ಲುತ್ತಿದ್ದರು ಎಂದು ಜಗದೀಶ್ ಶೆಟ್ಟರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಸಿದ್ದು-ಡಿಕೆಶಿಗೆ ಸಂ’ಕಷ್ಟ’ : ‘ಸಿಎಂ ಮಾಡಿದ್ರೆ ಬೇಡ ಅನ್ನಲ್ಲ’ ಎಂದ ಪರಂ

500, ಸಾವಿರ ಹಣ ಹಂಚಿದ್ದಾರೆ

ನಾನು ಆರು ಚುನಾವಣೆ ಮಾಡಿದ್ದೀನಿ. ಮತದಾರರಿಗೆ ದುಡ್ಡು ಹಂಚಿರಲಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹಣ, ಕುಕ್ಕರ್ ಕೊಡುತ್ತಾರೆ. ಆದರೆ, ಬಿಜೆಪಿ ಹೆಸರು ಹೇಳಿಕೊಳ್ಳುವ ವ್ಯಕ್ತಿಗಳು ನಮ್ಮ ಕ್ಷೇತ್ರದಲ್ಲಿ ಹತಾಶರಾಗಿ ಹಣ ಹಂಚಿದ್ದಾರೆ. ಸ್ಲಮ್‌ಗಳಲ್ಲಿ ಜನರಿಗೆ 500, 1,000 ರೂ. ಹಣ ಕೊಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮತ ಚಲಾಯಿಸಿದ ಎಲ್ಲ ನಾಗರಿಕರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಆಶೀರ್ವದದಿಂದ ಕಾಂಗ್ರೆಸ್ ಗೆಲ್ಲಲಿದೆ. ಮುಂದೆಯೂ ಸಹ ಕ್ಷೇತ್ರದ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಿಮ್ಮೆಲ್ಲರ ಸಹಕಾರ ಪ್ರೀತಿ ಬೆಂಬಲ ನನ್ನೊಂದಿಗೆ ಸದಾ ಇರಲಿ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES