Thursday, March 28, 2024

ಏಪ್ರಿಲ್ ಮೊದಲ ವಾರ ಮತ್ತೆ ಕರ್ನಾಟಕಕ್ಕೆ ಬರುತ್ತೇನೆ : ಇಲ್ಲಿದೆ ನೋಡಿ ಮೋದಿ ಸಂಪೂರ್ಣ ಭಾಷಣದ ಹೈಲೆಟ್ಸ್..!

ಬೆಂಗಳೂರು : ದಾವಣೆಗೆರೆಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಮಹಾ ಸಂಗಮ ಸಮಾರಂಭವನ್ನು ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ಭಾಷಣ ಮಾಡಿದ್ದಾರೆ. ಮೋದಿ ಭಾಷಣದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮತ್ತೆ ಕರ್ನಾಟಕಕ್ಕೆ ಬರುತ್ತೇನೆ. ವಿಶ್ವ ಹುಲಿ ದಿನದ ಪ್ರಯುಕ್ತ ಕರ್ನಾಟಕದ ಹುಲಿಗಳ ಮಧ್ಯೆ ಇರಲು ಬರುತ್ತೇನೆ. ಜತೆಗೆ, ನಿಮ್ಮ ದರ್ಶನಕ್ಕಾಗಿ ನಾನು ಬರುತ್ತೇನೆ. ನಿಮ್ಮ ಆಶೀರ್ವಾದವೇ ನಮಗೆ ಶಕ್ತಿ, ಹೊಸ ಶಕ್ತಿ, ಹೊಸ ಹುಮ್ಮಸ್ಸು ದೊರೆಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಹರಿಹರೇಶ್ವರನಿಗೆ ಮೋದಿ ಪ್ರಣಾಮ

ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದಾವಣಗೆರೆಯ ನನ್ನ ಸಹೋದರ-ಸಹೋದರಿಯರಿಗೆ ನಮಸ್ಕಾರಗಳು. ಕರ್ನಾಟಕದ ನನ್ನ ಬಿಜೆಪಿಯ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು. ತಾಯಿ ಭುವನೇಶ್ವರಿ, ಹರಿಹರೇಶ್ವರನಿಗೂ ಹಾಗೂ ಈ ಭಾಗದ ಎಲ್ಲಾ ಮಠಗಳಿಗೂ ನನ್ನ ಪ್ರಣಾಮಗಳು ಎಂದರು.

ಖರ್ಗೆ ತವರಲ್ಲಿ ಕಮಲ ಅರಳಿದೆ

ದಾವಣೆಗೆರೆಗೆ ಬರುವ ಅವಕಾಶ ಮತ್ತೆ ಸಿಕ್ಕಿದೆ. ಪ್ರತಿ ಬಾರಿ ನಿಮ್ಮ ಆರ್ಶೀವಾದ ಹೆಚ್ಚುತ್ತಿದೆ. ದಾವಣೆಗೆರೆಯ ಜನತೆಯನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ. ಎಐಸಿಸಿ ಅಧ್ಯಕ್ಷರ ತವರಲ್ಲಿ ಕಮಲ ಅರಳಿದೆ. ಕಲಬುರಗಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿದಿದೆ ಎಂದು ಮಲ್ಲಿಕಾರ್ಜುನ ಖರ್ಗೆಗೆ ಟಾಂಗ್ ಕೊಟ್ಟರು.

ಪ್ರತಿ ಕಾರ್ಯಕರ್ತರು ನಮ್ಮ ಮಿತ್ರರು, ಸಹೋದರರು

ವಿಜಯ ಸಂಕಲ್ಪ ಯಾತ್ರೆಯ ಉತ್ಸಾಹ, ನವ ಶಕ್ತಿ, ಪ್ರತಿ ಬೂತಿಗೆ ತಲುಪಿಸಬೇಕಿದೆ. ಆ ಮೂಲಕ ಪ್ರತಿ ಬೂತನ್ನು ಗೆಲ್ಲುವ ಸಂಕಲ್ಪ ಮಾಡಬೇಕಿದೆ. ಬಿಜೆಪಿಯಲ್ಲಿ ಯಾರು ದೊಡ್ಡವರು ಇಲ್ಲ, ಯಾರು ಸಣ್ಣವರು ಇಲ್ಲ. ಇಲ್ಲಿ ಎಲ್ಲಾ ಕಾರ್ಯಕರ್ತರು ಸಮಾನರು. ಕರ್ನಾಟಕ ಬಿಜೆಪಿಯ ಪ್ರತಿ ಕಾರ್ಯಕರ್ತರು ನಮ್ಮ  ಮಿತ್ರರು, ನನ್ನ ಸಹೋದರರು ಎಂದು ಹೇಳಿದರು.

ನಾನು ಮಾಜಿ ಸಿಎಂ ಒಬ್ಬರ ವಿಡಿಯೋ ನೋಡ್ದೆ..!

ಸೋಶಿಯಲ್ ಮೀಡಿಯಾದಲ್ಲಿ ನಿನ್ನೆ ವೀಡಿಯೋ ನೋಡಿದೆ. ಮಾಜಿ ಸಿಎಂ ಅವರದ್ದೇ ಪಕ್ಷದ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಆದರೆ, ಬಿಜೆಪಿಯಲ್ಲಿ ಯಾರೂ ದೊಡ್ಡವರಲ್ಲ. ನಾವೆಲ್ಲರೂ ಒಂದೇ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ನನ್ನ ಪರಮ ಮಿತ್ರ, ನನ್ನ ಶಕ್ತಿ, ನನ್ನ ಸಹೋದರ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ರೈತರ ಹೆಸರಲ್ಲಿ ಕಾಂಗ್ರೆಸ್-ಜೆಡಿಎಸ್​ ರಾಜಕೀಯ

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳಿದ್ದಾಗ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗೆ ತಲುಪಲೇ ಇಲ್ಲ. ನಮ್ಮ ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ರೈತರಿಗೆ ತಲುಪುವಂತೆ ಆಯಿತು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳಿದ್ದಾಗ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗೆ ತಲುಪಲೇ ಇಲ್ಲ. ನಮ್ಮ ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ರೈತರಿಗೆ ತಲುಪುವಂತೆ ಆಯಿತು ಎಂದು ಹೇಳಿದರು.

ಹಗಲು-ರಾತ್ರಿ ಕೆಲಸ ಮಾಡುವ ಸರ್ಕಾರ

ನಾನು ಬೆಂಗಳೂರಿನಲ್ಲಿ ವೈಟ್ ಫೀಲ್ಡ್ ಮೆಟ್ರೋ, ತುಮಕೂರಿನಲ್ಲಿ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದೆ.  ಬೆಂಗಳೂರು-ಮೈಸೂರು ಹೆದ್ದಾರಿ, ಐಐಟಿ ಧಾರವಾಡ ಕ್ಯಾಂಪಸ್, ಜಲ ಜೀವನ್ ಮೀಷನ್ ಲೋಕಾರ್ಪಣೆ ಆಗಿದೆ. ಇದು ದಿನ-ರಾತ್ರಿ ಕೆಲಸ ಮಾಡುವ ಡಬಲ್ ಎಂಜಿನ್ ಸರ್ಕಾರ ಎಂದು ಪ್ರಧಾನಿ ಮೋದಿ ತಿಳಿಸಿದರು.

ಪೂರ್ಣ ಬಹುಮತದೊಂದಿಗೆ ಬಿಜೆಪಿ ಗೆಲ್ಲಿಸಿ

ಲಂಬಾಣಿ ತಾಂಡಗಳಿಗೆ ಹಕ್ಕು ಪತ್ರ ನೀಡಿದ್ದೇವೆ. ದಲಿತರು, ಆದಿವಾಸಿಗಳು, ವಂಚಿತರನ್ನು ಕಡೆಗಣಿಸಿಲ್ಲ. ಕರ್ನಾಟದಲ್ಲಿ ಅವಕಾಶವಾದಿ ಸಮ್ಮಿಶ್ರ ಸರ್ಕಾರದಿಂದ ನಷ್ಟವಾಗಿದೆ. ಇಲ್ಲಿ ಬಹುಮತದ ಬಿಜೆಪಿ ಸರ್ಕಾರ ಬೇಕು. ಬಹುಮತ ಸಿಗದಿದ್ದರೆ, ರಾಜ್ಯಕ್ಕೆ ಅನುಕೂಲವಿಲ್ಲ. ಸದೃಢ ಸರ್ಕಾರ ಬೇಕು. ಕರ್ನಾಟಕದ ವಿಕಾಸಕ್ಕಾಗಿ, ಬಹುಮತದ ಸ್ಥಿರ ಸರ್ಕಾರ ಬೇಕಿದೆ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಪೂರ್ಣ ಬಹುಮತದ ಸರ್ಕಾರವನ್ನು ಗೆಲ್ಲಿಸಬೇಕಿದೆ. ಮನೆ ಮನೆಗೆ ತಲುಪುವ ಮೂಲಕ ಬಿಜೆಪಿಯನ್ನು ಗೆಲ್ಲಿಸಿ ಎಂದು ಕರೆಕೊಟ್ಟರು.

ಕಾಂಗ್ರೆಸ್ ಗ್ಯಾರಂಟಿ ನಂಬಬೇಕೆ?

ಕಾಂಗ್ರೆಸ್ ಪಾಲಿಗೆ ಕರ್ನಾಟಕ  ಎಟಿಎಂ ಇದ್ದಂತೆ. ಕಾಂಗ್ರೆಸ್ ಪಕ್ಷ ಸುಳ್ಳು ಗ್ಯಾರಂಟಿಗಳನ್ನು ನೀಡುತ್ತದೆ. ಇದಕ್ಕೆ ಉದಾಹರಣೆ ಹಿಮಾಚಲ ಪ್ರದೇಶ. ಅವರು ಉದ್ಯೋಗ, ಭತ್ಯೆ, ಕುರಿತಂತೆ ಗ್ಯಾರಂಟಿ ನೀಡಿದ್ದರು. ಮೊನ್ನೆ ಬಜೆಟ್ ಘೋಷಣೆ ಆಯಿತು. ಆದರೆ ಚುನಾವಣಾ ಪೂರ್ವ ಯಾವ ಗ್ಯಾರಂಟಿಯೂ ಅಲ್ಲಿ ಇರಲಿಲ್ಲ, ಇಂತಹ ಕಾಂಗ್ರೆಸ್ ಗ್ಯಾರಂಟಿ ನಂಬಬೇಕೆ? ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳ ನಡೆಸಿದರು.

ಸಿಎಂ ಬೊಮ್ಮಾಯಿ ಅಂಡ್ ಟೀಂಗೆ ಥ್ಯಾಂಕ್ಸ್

ಇಡೀ ವಿಶ್ವ ಭಾರತದೆಡೆ ನೋಡಿದರೆ, ಇಡೀ ಭಾರತ ಕರ್ನಾಟಕದ ಕಡೆ ನೋಡುತ್ತದೆ. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಕೋವಿಡ್ ನಡುವೆಯೂ ಕರ್ನಾಟಕ ವಿದೇಶಿ ನೇರ ಹೂಡಿಕೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಅದಕ್ಕೆ ಮುಖ್ಯಮಂತ್ರಿ ಹಾಗೂ ಅವರ ಸಚಿವ ಸಂಪುಟಕ್ಕೆ  ಅಭಿನಂದನೆ ಕೋರುತ್ತೇನೆ ಎಂದರು.

ದಾವಣಗೆರೆಯಲ್ಲಿ ಟೆಕ್ಸ್ ಟೈಲ್ಸ್ ಹಬ್ ನಿರ್ಮಾಣ

ದೇಶಾದ್ಯಂತ 7 ಟೆಕ್ಸ್ ಟೈಲ್ಸ್ ಹಬ್ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ಒಂದು ದಾವಣಗೆರೆಯಲ್ಲಿ ಇದೆ. ಇದು ಹಲವು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತಿದೆ. ಈ ಮೂಲಕ ಯುವಕರಿಗೆ ಉದ್ಯೋಗದ ಅವಕಾಶ ದೊರಕುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನಿಮ್ಮ ಮತದ ತಾಕತ್ತು ತೋರಿಸಿ

ವಿಶ್ವ ಭೂಪಟದಲ್ಲಿ ಹಿಂದೂಸ್ಥಾನದ (ಭಾರತಕ್ಕೆ) ಬಗ್ಗೆ ಜೈ ಕಾರ ಕೇಳಿಬರುತ್ತದೆ. ಪ್ರಪಂಚದಾದ್ಯಂತ ಭಾರತಕ್ಕೆ ಜೈಕಾರ ಹಾಕುತ್ತಿದ್ದಾರೆ. ಇದು ಕೇವಲ ಮೋದಿಯ ಕಾರಣಕ್ಕೆ ಅಲ್ಲ. ನೀವೆಲ್ಲರೂ ವೋಟ್ ನೀಡಿದ ಕಾರಣಕ್ಕೆ ಜಗತ್ತಿನಲ್ಲಿ ಭಾರತದ ಪರ ಜೈಕಾರ ಮೊಳಗುತ್ತಿದೆ. ಇದು ಕರ್ನಾಟದಲ್ಲೂ ನಿಮ್ಮಿಂದ ಸಾಧ್ಯ ಆಗಬೇಕು. ನಿಮ್ಮ ಮತದ ತಾಕತ್ತು ತೋರಿಸುವ ಕಾಲ ಬಂದಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದ ಸಿದ್ದೇಶ್ವರ, ಸದಾನಂದಗೌಡ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES