ಬೆಂಗಳೂರು: ನಿನ್ನೆಯ ಲೋಕಾಯುಕ್ತರ ದಾಳಿಯಲ್ಲಿ ಏಳೂವರೆ ಕೋಟಿ ಹಣ ಸಿಕ್ಕಿದೆ. ಅಮಿತ್ ಶಾ ಅವರು ಆರೇಳು ಸಲ ರಾಜ್ಯಕ್ಕೆ ಬಂದಿದ್ದಾರೆ. ಬಂದಾಗೆಲ್ಲ ಜೆಡಿಎಸ್ ಎಟಿಎಮ್ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಆದರೆ, ಯಾವ ಪರಿವಾರ ಎಟಿಎಮ್ ಅಂತ ಈಗ ಉದಾಹರಣೆ ಸಿಕ್ಕಿದ್ದು, ಅಕ್ರಮ ಟೆಂಡರ್ಗಳ ಭ್ರಷ್ಟಾಚಾರ ಹೊರಬಿದ್ದಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಶುಕ್ರವಾರ ಹೇಳಿದ್ದಾರೆ.
ದಾವಣಗೆರೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಮಗ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನನ್ನ ಮಗನಿಗೆ ಸಂಬಂಧಿಸಿದ್ದು, ನನ್ನದಲ್ಲ ಅಂತ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ. ಆಗಿದ್ರೆ ರಾಜೀನಾಮೆ ಯಾಕೆ ನೀಡಿದರು. ಮಗನ ಮೇಲೆ ಕಾನೂನು ಕ್ರಮ ತಗೋಳಿ ಅಂತ ಹೇಳಬೇಕಿತ್ತು ಎಂದಿದ್ದಾರೆ.
ಇದನ್ನೂ ಓದಿ : ಸುಳ್ಳು ಹೇಳುವುದು ಕಾಂಗ್ರೆಸ್ ಜಾಯಮಾನ : ಸಿಎಂ ಬೊಮ್ಮಾಯಿ
ಇನ್ನು ಇಂದು ಎಲ್ಲಾ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಚಾರ ಮುಕ್ತ ಬಿಜೆಪಿಯ ಅಧಿಕಾರ ಇದೇನಾ? ಕೇಂದ್ರ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ಯಾ? ಬಿಜೆಪಿಯವರು ನಿರಂತರವಾಗಿ ಕರ್ನಾಟಕ್ಕೆ ಬರ್ತಿರೋದು ಸೂಟ್ ಕೇಸ್ ತಗೊಂಡು ಹೋಗೊಕಾ!? ಭ್ರಷ್ಟಾಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಮೀರಿಸಿ ಹೋಗುತ್ತಿದೆ. ದುಡ್ಡು ಲೂಟಿ ಮಾಡಿ ಜನಕ್ಕೆ ದುಡ್ಡು ಕೊಡ್ತೀವಿ ಅಂತ ಹೇಳ್ತಿದ್ದಾರೆ. ಇದು ತಾರ್ಕಿಕ ಅಂತ್ಯವಾಗಲ್ಲ, ಸಂವಿಧಾನದ ಚೌಕಟ್ಟಿನಲ್ಲಿ ಶಿಕ್ಷೆ ಆಗಲ್ಲ. ಅಂತಿಮವಾಗಿ ಜನತೆ ತೀರ್ಮಾನ ಮಾಡಬೇಕು ಎಂದು ಹೆಚ್ಡಿಕೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸದ್ಯ ಕರ್ನಾಟಕದ ಹೆಸರನ್ನು ಕಮಿಷನ್ ರಾಜ್ಯ ಅಂತ ಹೆಸರಿಡಬೇಕು. ಎರಡು ರಾಷ್ಟ್ರೀಯ ಪಕ್ಷಗಳು ಇಂತಹ ಪರಿಸ್ಥಿತಿಗೆ ತಂದಿವೆ. ಜನತಾ ನ್ಯಾಯಲಯದಲ್ಲಿ ತೀರ್ಮಾನವಾಗಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್-ಬಿಜೆಪಿ ವಿರುದ್ಧ ಗುಡುಗಿದ್ದಾರೆ.