ಬೆಂಗಳೂರು : ಬಿಜೆಪಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ ಶಿವಕುಮಾರ್, ಲೋಕಾಯುಕ್ತ ಅಧಿಕಾರಿಗಳನ್ನ ಅಭಿನಂದಿಸುತ್ತೇನೆ. ಸಿಎಂ ಬೊಮ್ಮಾಯಿ ಸಾಕ್ಷ್ಯ ಕೇಳ್ತಾ ಇದ್ದರು, ಹಣ ಪತ್ತೆ ಬಗ್ಗೆ ಲೋಕಾಯುಕ್ತ ಅಧಿಕಾರಿಗಳೇ ಸಾಕ್ಷ್ಯ ಕೊಟ್ಟಿದ್ದಾರೆ. ಶಾಸಕರ ಕಚೇರಿ, ಮನೆಯಲ್ಲಿ ಲಕ್ಷಾಂತರ ರೂ. ಸಿಕ್ಕಿದೆ. ಹೀಗಾಗಿ, ಸಿಎಂ ಬಸವರಾಜ ಬೊಮ್ಮಾಯಿ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ದಾಖಲೆ ಸಿಕ್ಕಿದ್ದಕ್ಕೆ ಡಿಕೆಶಿ ತಿಹಾರ್ ಜೈಲಿಗೆ ಹೋಗಿದ್ದು
ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪರ ಪುತ್ರ ಪ್ರಶಾಂತ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು, ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ನಿಸ್ಪಕ್ಷಪಾತವಾಗಿ ತನಿಖೆಗೆ ಆದೇಶ ನೀಡುತ್ತೇವೆ : ಸಿಎಂ ಬೊಮ್ಮಾಯಿ
ಬೀದರ್ ನಲ್ಲಿ ಮಾತನಾಡಿರುವ ಕಟೀಲ್, ಲೋಕಾಯುಕ್ತ ಸಂಸ್ಥೆಯನ್ನು ಸದೃಢ ಮಾಡಿದ್ದೇ ನಾವು. ತನಿಖೆಯಾಗಲಿ ಇದರಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪರವರು ಭಾಗಿಯಾಗಿದ್ದರೆ ಅವರ ವಿರುದ್ದವು ಖಂಡಿತಾ ಕ್ರಮ ಕೈಗೊಳ್ಳುತ್ತೇವೆ. ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಸರ್ಕಾರಿ ಅಧಿಕಾರಿಯಾಗಿದ್ದಾನೆ, ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಹೇಳಿದ್ದಾರೆ.
ಡಿಕೆಶಿ ರಾಜೀನಾಮೆ ಕೊಡಲಿ
ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಭ್ರಷ್ಟಾಚಾರದ ದಾಖಲೆ ಸಿಕ್ಕಿದ್ದಕ್ಕೆ ಡಿ.ಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿದ್ದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾಕೆ ರಾಜೀನಾಮೆ ಕೊಡಲಿಲ್ಲ. ಮೊದಲು ಡಿ.ಕೆ ಶಿವಕುಮಾರ್ ರಾಜೀನಾಮೆ ಕೊಡಲಿ, ಆಮೇಲೆ ನೋಡೋಣ ಎಂದು ಕುಟಿಕಿದ್ದಾರೆ.