Thursday, April 25, 2024

ಸರಳ ವಾಸ್ತು ಗುರೂಜಿ ಕೊಲೆಗೆ ಕಾರಣ ಬೇನಾಮಿ ಆಸ್ತಿ..!

ಹುಬ್ಬಳ್ಳಿ : ಜುಲೈ 5 ರಂದು ಹುಬ್ಬಳ್ಳಿಯ ಪ್ರತಿಷ್ಠಿತ ಖಾಸಗಿ ಹೋಟೆಲ್​ನಲ್ಲಿ ಚಂದ್ರಶೇಖರ್ ಗುರೂಜಿ ಹತ್ಯೆಯಾಗಿತ್ತು. ಗುರೂಜಿ ಹತ್ಯೆಗೆ 3 ತಿಂಗಳಿನಿಂದ ಹಂತಕರು ಸ್ಕೆಚ್ ಹಾಕಿದ್ದು, ಸಾರ್ವಜನಿಕವಾಗಿ ಅವರನ್ನು ಕೊಲ್ಲಲು ಪ್ಲಾನ್ ಮಾಡಿದ್ದರು. ಆದ್ರೆ ಅದು ಸಫಲವಾಗಿರಿಲ್ಲವಂತೆ. ಆದ್ದರಿಂದ ತಮ್ಮ ಮೊಮ್ಮಗನ ಸಾವಿನಿಂದ ಗುರೂಜಿ ಹುಬ್ಬಳ್ಳಿಗೆ ಬಂದ ವಿಷಯ ತಿಳಿದ ಆರೋಪಿಗಳು, ಗುರೂಜಿ ಬಂದ ದಿನವೇ ಖಾಸಗಿ ಹೊಟೇಲ್​​ನಲ್ಲಿ ರೂಮ್ ಪಡೆದು ಕೊಲೆಗೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ಅಲ್ಲದೆ ಕೊಲೆಯ ಹಿಂದಿನ ದಿನ ಗುರೂಜಿಗೆ ಕರೆ ಮಾಡಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೊಣ ಅಂತ ನಾಟಕ ಮಾಡಿದ್ದರಂತೆ. ಅದರಂತೆ ಮಹಾಂತೇಶ್ ಶಿರೂರು ಹಾಗೂ ಮಂಜುನಾಥ್ ಮರೆವಾಡ ಪ್ಲ್ಯಾನ್ ಮಾಡಿ ಗುರುಜಿಯನ್ನ ಭೀಕರವಾಗಿ ಕೊಲೆ ಮಾಡಿದ್ದರು.

ಗುರೂಜಿ ಕೊಲೆಗೆ ಪ್ರಮುಖ ಕಾರಣವೇನು ಎಂಬುವುದನ್ನ 800 ಪುಟಗಳ ಚಾರ್ಜ್​​​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ಗುರೂಜಿ ಹತ್ಯೆಗೆ ಹಂತಕನ ಹೆಸರಿನಲ್ಲಿದ್ದ 10 ಕೋಟಿ ಮೌಲ್ಯದ ಬೇನಾಮಿ ಆಸ್ತಿ ವ್ಯಾಜ್ಯ ಹಾಗೂ ತಮ್ಮನ್ನ ಕೆಲಸದಿಂದ ತೆಗೆದು ಹಾಕಿದ ಬಳಿಕ ಯಾವುದೇ ಲಾಭಾಂಶ ನೀಡಿಲ್ಲ ಎನ್ನುವ ಹತಾಶೆಯೇ ಕಾರಣ ಎಂದು ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಅಂದಾಜು 10 ಕೋಟಿ ಬೆಲೆ ಬಾಳುವ 4.5 ಏಕರೆ ಜಮೀನು ಬೇನಾಮಿಯಾಗಿ ಗುರೂಜಿ ಹಂತಕ ಮಹಾಂತೇಶ ಹೆಸರಿಗೆ ಮಾಡಿದ್ದರು. ಈ ಜಮೀನನ್ನು ಮಹಾಂತೇಶ್​​ ಗುರೂಜಿ ತಿಳಿಯದಂತೆ ವ್ಯವಹಾರ ಮಾಡಿ ಹಣ ಪಡೆದಿದ್ದ. ತನ್ನ ಪ್ರಾಪರ್ಟಿಯನ್ನು ಮಹಾಂತೇಶ್​​ ಕಬಳಿಸಿದ್ದಕ್ಕೆ ಗುರೂಜಿ ಸಿಟ್ಟಾಗಿದ್ದರು. ಹೀಗಾಗಿ ಇಬ್ಬರ ವ್ಯಾಪಾರದಲ್ಲಿ ತಲೆ ಹಾಕಿ ಕಿರುಕಳ ನೀಡಿದ್ದರು ಎಂದು ಹಂತಕರು ಆರೋಪಿಸಿದ್ದಾರೆ. ಇದೆಲ್ಲಾ ವಿಚಾರವೇ ಇದೀಗ ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್​​​ ಗುರೂಜಿಯ ಹಂತಕರು ಕೊಲೆಯ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಹಂತಕರನ್ನ ಘಟನೆ ನಡೆದ 4 ಗಂಟೆಯಲ್ಲೇ ಸೆರೆ ಹಿಡಿದು ಸೈ ಎನಿಸಿಕೊಂಡಿದ್ದರು. ಇದೀಗ ಘಟನೆ ನಡೆದ 90 ದಿನದೊಳಗೆ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಮಲ್ಲಿಕ್ ಬೆಳಗಲಿ ಪವರ್ ಟಿವಿ ಹುಬ್ಬಳ್ಳಿ

RELATED ARTICLES

Related Articles

TRENDING ARTICLES