Friday, April 19, 2024

ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವೈದ್ಯರ ಸೇವೆ; ಕಠಿಣ ಕ್ರಮಕ್ಕೆ ಚಿಂತನೆ

ಬಳ್ಳಾರಿ: ಬಳ್ಳಾರಿ ನಗರದ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್​ ಕಡಿತ, ಜನರೇಟರ್​ ಕೈಕೊಟ್ಟು 3 ರೋಗಿಗಳ ಸಾವು ಪ್ರಕರಣ ಬಗ್ಗೆ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಆರೋಗ್ಯ ಸಮಸ್ಯೆಯಿಂದ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಹೋಗಿರಲಿಲ್ಲ. ನನ್ನ ಪರವಾಗಿ ಸಚಿವ ಶ್ರೀರಾಮುಲು ಸದನದಲ್ಲಿ ಈ ಬಗ್ಗೆ ಉತ್ತರ ಕೊಟ್ಟಿದ್ದಾರೆ. ಸತ್ಯವನ್ನು ಮುಚ್ಚಿಡಲು ಸಾಧ್ಯವಾಗುವುದಿಲ್ಲ. ರಾಜ್ಯದ ಜನರಿಗೆ ಸತ್ಯ ಗೊತ್ತಾಗಬೇಕು ಅನ್ನೋದು ನಮ್ಮ ಉದ್ದೇಶ. ಈ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ತನಿಖೆ ಸಮಿತಿ ಮಾಡಿದ್ದೇವೆ ಎಂದರು.

ತನಿಖಾ ಸಮಿತಿ ಕೂಡ ವಿಮ್ಸ್ ಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿ ವಿಮ್ಸ್ ವೈದ್ಯಕೀಯ ಸಂಸ್ಥೆ ರಾಜ್ಯದಲ್ಲಿ ಉತ್ತಮ ಹೆಸರು ಮಾಡಿದೆ. ವಿದ್ಯುತ್ ಸ್ಥಗಿತವಾದ ವೇಳೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ವೈದ್ಯಾಧಿಕಾರಿಗಳು ದಾಖಲೆ ನೀಡಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಇತ್ತು, ಮೆದುಳಿನಲ್ಲಿ ರಕ್ತಸ್ರಾವ ಆಗಿ ಬಿಪಿ ಕೂಡ ಹೆಚ್ಚಾಗಿ ಸೆ.14 ರಂದು ಸಾವನ್ನೊಪ್ಪಿದ್ದಾರೆ ಎಂದು ಸಚಿವರು ತಿಳಿಸಿದರು.

ಸಾವಿಗೆ ಕಾರಣ ಬಗ್ಗೆ ನಾನು ಈಗಲೇ ಹೇಳುವುದಿಲ್ಲ. ಹೀಗಾಗಲೇ ಈ ಬಗ್ಗೆ ಉನ್ನತ ಮಟ್ಟದ ಸಮಿತಿ ತನಿಖೆ ನಡೆಯುತ್ತಿದೆ. ಮೆದುಳಿನಲ್ಲಿ ರಕ್ತಸ್ರಾವದಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ವರದಿ ನೀಡಿದ್ದಾರೆ. 30 ವರ್ಷದ ಮಹಿಳೆ ಸೆ 13 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಹಾವು ಕಚ್ಚಿದ್ದರಿಂದ ಚಿಕಿತ್ಸೆಗೆ ದಾಖಲಾಗಿದ್ದರು. ಮಹಿಳೆಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗಿದೆ. ಆದರೆ ಮಹಿಳೆಗೆ ಚೇತರಿಕೆ ಕಾಣಲಿಲ್ಲ, ಆರೋಗ್ಯ ಸ್ಥಿತಿ ಗಂಭೀರವಾಗಿ ಮೃತಪಟ್ಟಿದ್ದಾರೆ.

ಇನ್ನು ವಿದ್ಯುತ್ ಸ್ಥಗಿತವಾದರೂ ವೆಂಟಿಲೇಟರ್ ಬ್ಯಾಕ್ ಆಫ್ ಇತ್ತು. ಮಹಿಳೆಗೆ ಕಾರ್ಡಿಯಾಕ್ ಆರೆಸ್ಟ್ ಆಗಿದೆ. ಎರಡು ಸಾವು ಕೂಡ ಈ ಕಾರಣಕ್ಕೆ ಆಗಿದೆ ಅಂತಾ ವೈದ್ಯಾಧಿಕಾರಿಗಳು ವರದಿ ನೀಡಿದ್ದಾರೆ. ಇದರ ಹೊರತಾಗಿಯೂ ಎಲ್ಲಾ ವಿಭಾಗದ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದೇವೆ. ತನಿಖಾ ವರದಿ ಬಂದ ಬಳಿಕ ಸದನದ ಮುಂದೆ ರಾಜ್ಯದ ಜನರ ಮುಂದೆ ವರದಿ ನೀಡುತ್ತೇವೆ. ತನಿಖಾ ಬಳಿಕ ವರದಿಯಲ್ಲಿ ಯಾರಾದರೂ ನಿರ್ಲಕ್ಷ್ಯ ಕಂಡು ಬಂದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಇನ್ನು ನನ್ನ ವಿರುದ್ಧ ಈ ಕೇಸ್​ ಮೂಲಕ ಷಡ್ಯಂತ್ರ ನಡೆದಿದೆ ಎಂದು ವಿಮ್ಸ್​ ನಿರ್ದೇಶಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಷಡ್ಯಂತ್ರ ನಡೆದಿದ್ರೆ ಈ ಬಗ್ಗೆ ತನಿಖಾ ಸಮಿತಿ ತನಿಖೆ ನಡೆಸಲಿದೆ.

ಸೋಮಶೇಖರ್ ರೆಡ್ಡಿ ಅಸಮಾಧಾನ ವಿಚಾರವಾಗಿ ಮಾತನಾಡಿ, ವಿಮ್ಸ್ ನಿರ್ದೇಶಕರ ಆಯ್ಕೆಗೆ ಮಾರ್ಗಸೂಚಿ ಇರುತ್ತದೆ. ಅರ್ಹತೆ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ. ವೈದ್ಯಕೀಯ ಸಂಸ್ಥೆಗಳಲ್ಲಿ ವೈದ್ಯರ ಹಾಜರಾತಿಗೆ ಬಯೋಮೆಟ್ರಿಕ್ ಮಾಡಿದ್ದೇವೆ. ಸರ್ಕಾರ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರಿಗೆ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಕೆ.ಸುಧಾಕರ್​ ತಿಳಿಸಿದರು.

RELATED ARTICLES

Related Articles

TRENDING ARTICLES