Friday, March 29, 2024

 ದೊಡ್ಡಬಳ್ಳಾಪುರದಲ್ಲಿ ಮೊಳಗುತ್ತಾ ಕಮಲ ಕಹಳೆ..?

ದೊಡ್ಡಬಳ್ಳಾಪುರ : ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇನ್ನು ಆರೇ ಆರು ತಿಂಗಳು ಬಾಕಿಯಿದೆ. ಈಗಾಗಲೇ ಮೂರು ಪಕ್ಷಗಳು ಚುನಾವಣೆ ರಣಕಹಳೆ ಮೊಳಗಿಸಿವೆ. ಕಳೆದ ತಿಂಗಳು ಸಿದ್ದರಾಮೋತ್ಸವ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶಿಸಿದೆ. ಶನಿವಾರ ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರದಲ್ಲಿ ಕಮಲ ಕಹಳೆ ಮೊಳಗಿಸಲು ರಾಜ್ಯ ಬಿಜೆಪಿ ನಾಯಕರು ಸಜ್ಜಾಗಿದ್ದಾರೆ.

ಈ ಹಿಂದೆ ಜನೋತ್ಸವ ಕಾರ್ಯಕ್ರಮದ ಹೆಸರಿನಲ್ಲಿ ಸಾಧನಾ ಸಮಾವೇಶ ನಡೆಸಲು ಬಿಜೆಪಿ ಮುಂದಾಗಿತ್ತು. ಆದ್ರೆ, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಮತ್ತು ಸಚಿವ ಉಮೇಶ್ ಕತ್ತಿ ಸಾವಿನ ಹಿನ್ನೆಲೆಯಲ್ಲಿ ಎರಡು ಬಾರಿ ಸಮಾವೇಶವನ್ನು ಮುಂದೂಡಲಾಯ್ತು. ಇನ್ನು, ಸೆಪ್ಟೆಂಬರ್ 11ಕ್ಕೆ ಜನೋತ್ಸವದ ದಿನಾಂಕ ಮರುನಿಗದಿಯಾಗಿತ್ತು. ಆದರೆ 10ರ ನಂತರ ಶುಭ ದಿನಗಳು ಇರುವುದಿಲ್ಲ ಅನ್ನೋ ಕಾರಣಕ್ಕೆ ಇದೇ 10 ರಂದು ಅಂದ್ರೆ ಶನಿವಾರ ಜನೋತ್ಸವದ ಬದಲು ಜನಸ್ಪಂದನ ಎಂದು ಬದಲಿಸಿದ ಬೃಹತ್ ಸಮಾವೇಶ ನಡೆಸಲು ಸರ್ಕಾರ ಮುಂದಾಗಿದೆ.

ಸಮಾವೇಶಕ್ಕಾಗಿ ಬೃಹತ್ ವೇದಿಕೆ‌ ನಿರ್ಮಾಣವಾಗಿದೆ. ಸುಮಾರು 40 ಎಕರೆ ಜಾಗದಲ್ಲಿ ಪೆಂಡಾಲ್ ಹಾಕಲಾಗಿದೆ. ವೇದಿಕೆಯ‌ ಮೇಲೆ ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಕೇಂದ್ರ ಸಚಿವೆ ಸೃತಿ ಇರಾನಿ ಸೇರಿದಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಇನ್ನು, ಸಮಾವೇಶದ ಬಂದೋಬಸ್ತ್​ಗಾಗಿ ಸುಮಾರು 2 ಸಾವಿರ ಪೊಲೀಸರನ್ನ ನಿಯೋಜಿಸಲಾಗಿದೆ. ದೇವನಹಳ್ಳಿ ಕಡೆಯಿಂದ ರಘುನಾಥಪುರ ಗ್ರಾಮದ ಸಮೀಪ ಹಾಗೂ ದೊಡ್ಡಬಳ್ಳಾಪುರ ಕಡೆಗೆ ಒಂದು ಕಿ.ಮಿ ದೂರದಲ್ಲಿ ವಾಹನಗಳ ನಿಲುಗಡೆಗಾಗಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಶಕ್ತಿ ಕಡಿಮೆ ಇರೋ ಕಡೆ ಜನಸ್ಪಂದನ ಕಾರ್ಯಕ್ರಮ ಮಾಡೋ ಮೂಲಕ ಪಕ್ಷ ಬಲಿಷ್ಠಗೊಳಿಸಲು ಮುಂದಾಗಿದೆ. ರಾಜ್ಯದಲ್ಲಿ ಇನ್ನೂ 6 ಕಡೆ ಜನಸ್ಪಂದನ ಮಾಡಬೇಕಿದೆ. ಮುಂದಿನ ವಿಧಾನ ಸಭಾ ಚುನಾವಣೆಗೆ ಜನಸ್ಪಂದನ ಕಾರ್ಯಕ್ರಮ ಯಾವ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ರಾಮಾಂಜಿ.ಎಂ.ಬೂದಿಗೆರೆ, ಪವರ್ ಟಿವಿ, ದೇವನಹಳ್ಳಿ

RELATED ARTICLES

Related Articles

TRENDING ARTICLES