Friday, March 29, 2024

ಮನೆ ಮನೆಗೂ ಯಶ್.. ಬಿಲ್ಡಪ್ ಬಗ್ಗೆ ಹೇಳಿದ್ದೇನು..?

ಮನಸ್ಸಿದ್ದರೆ ಮಾರ್ಗ ಅನ್ನೋ ಮಾತು ಬಹುಶಃ ನ್ಯಾಷನಲ್ ಸ್ಟಾರ್ ಯಶ್ ಅವ್ರ ನಡೆ & ನುಡಿಗೆ ಹೇಳಿ ಮಾಡಿಸಿದಂತಿದೆ. ಕಂಡ ಕನಸುಗಳ ಬೆನ್ನು ಹತ್ತೋ ಕನಸುಗಾರ, ಹಠವಾದಿ, ಛಲಗಾರ ಈ ರಾಕಿಭಾಯ್. ಕೆಜಿಎಫ್ ಚಾಪ್ಟರ್-2 ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರದ ಯಶ್, ಇದೀಗ ಮನೆ ಮನೆಗೂ ಕಾಲಿಡೋ ಮನ್ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ, ತಾನು ಕೊಟ್ಟ ಬಿಲ್ಡಪ್ ಬಗ್ಗೆ ಬಹಿರಂಗವಾಗಿಯೇ ಮಾತನಾಡಿದ್ದಾರೆ.

  • ಸದ್ಯದಲ್ಲೇ ಕಿರುತೆರೆಯಲ್ಲಿ 1500 ಕೋಟಿಯ ಕೆಜಿಎಫ್

ಯೆಸ್.. ಕನ್ನಡ ಚಿತ್ರರಂಗದ ತಾಕತ್ತು ಎಂಥದ್ದು ಅನ್ನೋದನ್ನ ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತು ಮಾಡಿದ ಗತ್ತಿನ ವ್ಯಕ್ತಿ ರಾಕಿಂಗ್ ಸ್ಟಾರ್ ಯಶ್. ಸ್ಯಾಂಡಲ್​ವುಡ್​ನ ರಾಜಾಹುಲಿ, ಅಣ್ತಮ್ಮ, ರಾಕಿಂಗ್ ಸ್ಟಾರ್ ಕೆಜಿಎಫ್ ಅನ್ನೋ ಸಿನಿಮಾದಿಂದಾಗಿ ನ್ಯಾಷನಲ್ ಸ್ಟಾರ್ ಆಗಿ, ರಾಕಿಭಾಯ್ ಆಗಿ ನ್ಯಾಷನಲ್ ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ಸದ್ದು ಮಾಡಿದ್ರು.

ಸದ್ಯ ವಿಶ್ವ ಸಿನಿದುನಿಯಾದಲ್ಲೆಲ್ಲಾ ಚಾಲ್ತಿಯಲ್ಲಿರೋ ಏಕೈಕ ಹೆಸ್ರು ರಾಕಿಭಾಯ್ ಹಾಗೂ ಆತನ ಗೋಲ್ಡನ್ ಕಹಾನಿ ಅಂದ್ರೆ ತಪ್ಪಾಗಲ್ಲ. ಶ್ರಮದ ಜೊತೆ ಶ್ರದ್ಧೆ ಇದ್ರೆ ಅಸಾಧ್ಯವಾದದ್ದನ್ನೂ ಸಾಧ್ಯವಾಗಿಸಬಹುದು ಅನ್ನೋದಕ್ಕೆ ಕೇರ್ ಆಫ್ ಅಡ್ರೆಸ್ ಆಗಿ ಬದಲಾದ್ರು ಯಶ್. ಹಾಗಾಗಿಯೇ ಪ್ಯಾನ್ ಇಂಡಿಯಾ ಕಾನ್ಸೆಪ್ಟ್​ಗೆ ಒಂದು ಅರ್ಥ ಕಲ್ಪಿಸಿ, ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತರಿಸಿ ಗರಿಮೆ ಅವರೊಬ್ಬರಿಗೇ ಸಲ್ಲಲಿದೆ. ಇದೀಗ ಆ ಕೆಜಿಎಫ್ ಸಿನಿಮಾ ನಿಮ್ಮ ಮನೆಯ ಟಿವಿಗಳಿಗೆ ಬರ್ತಿದೆ. ಸದ್ಯದಲ್ಲೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.

1500 ಕೋಟಿ ಗಳಿಸಿದಂತಹ ಕೆಜಿಎಫ್ ಚಾಪ್ಟರ್-2 ಚಿತ್ರದ ರಿಲೀಸ್ ಬಳಿಕ ಯಶ್, ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಆದ್ರೆ ರೀಸೆಂಟ್ ಆಗಿ ಪತ್ನಿ ರಾಧಿಕಾ ಜೊತೆ ಯೂರೋಪ್ ಟ್ರಿಪ್ ಹೋಗಿಬಂದ್ರು. ಅದಾದ ಬಳಿಕ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಾಚರಣೆ, ರಕ್ಷಾ ಬಂಧನ್, ಮಕ್ಕಳ ರಕ್ಷಾ ಬಂಧನ್ ಹೀಗೆ ವೈಯಕ್ತಿಕವಾಗಿ ಫ್ಯಾಮಿಲಿ ಜೊತೆ ಕ್ವಾಲಿಟಿ ಟೈಂ ಕಳೆದರು.

ಇವೆಲ್ಲವುಗಳ ಜೊತೆಗೆ ರಾಕಿಭಾಯ್ ಯಶ್ ಟಾಕ್ ಆಫ್ ದಿ ಟೌನ್ ಆಗಿದ್ದು ಮಾತ್ರ ಮೈಸೂರಿನ ಯುವಜನ ಮಹೋತ್ಸವದಿಂದ ಅನ್ನಬಹುದು. ಅರಮನೆ ನಗರಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಯಶ್, ಕೆಜಿಎಫ್ ಸಕ್ಸಸ್ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು.

  • KGF ಸಕ್ಸಸ್ ಬಳಿಕ ತವರಲ್ಲಿ ಯಶ್ ಮೊದಲ ವೇದಿಕೆ
  • ಕಾಲೇಜ್ ಡೇಸ್ ನೆನೆದು.. ಜೀವನ ಪಾಠ ಮಾಡಿದ ರಾಕಿ
  • ‘ತನ್ನ ಆತ್ಮ ವಿಶ್ವಾಸ’ ಬಿಲ್ಡಪ್ ಅಲ್ಲ ಎಂದು ಮನವರಿಕೆ..!
  • ಹಸಿವಿದ್ರೆ ಊಟ ಸಿಗುತ್ತೆ.. ಪಾಸಿಟಿವ್ ಆಗಿ ನುಗ್ಗಿ- ಅಣ್ತಮ್ಮ

ಯೂತ್ ಐಕಾನ್ ಆಗಿ ಸಂಚಲನ ಮೂಡಿಸಿರೋ ಯಶ್,​ ಈ ಬಾರಿಯ ಯುವಜನ ಮಹೋತ್ಸವದ ಮುಖ್ಯ ಅತಿಥಿಯಾಗಿ ಮೈಸೂರಿನ ಹಸಹ್ರಾರು ಮಂದಿ ಯೂತ್ಸ್​ನ ಹುರಿದುಂಬಿಸಿದರು. ಸಿಎಂ, ಮಿನಿಸ್ಟರ್ ಅಶ್ವತ್ಥನಾರಾಯಣ್ ಜೊತೆ ವೇದಿಕೆ ಹಂಚಿಕೊಂಡ ರಾಕಿಭಾಯ್, ತಮ್ಮ ಫೋಕಸ್ಡ್ ಆಟಿಟ್ಯೂಡ್​​ನ ಮತ್ತೊಮ್ಮೆ ಮುಕ್ತವಾಗಿ ಬಿತ್ತರಿಸಿದರು.

ತನ್ನದೇ ಊರಿನ ಕಾಲೇಜು ಮಕ್ಕಳ ಮುಂದೆ ಮಾತನಾಡೋದು ಖುಷಿ ಎಂದ ಯಶ್, ಮೆಲ್ಲಗೆ ತಮ್ಮ ಕಾಲೇಜು ದಿನಗಳನ್ನ ಮೆಲುಕು ಹಾಕಿದ್ರು. ಅಲ್ಲದೆ, ತನ್ನ ಆತ್ಮ ವಿಶ್ವಾಸದ ಮಾತುಗಳನ್ನ ಸಾಕಷ್ಟು ಮಂದಿ ಲಘುವಾಗಿ ಪರಿಗಣಿಸಿದ್ರು. ಆದ್ರೆ ಇಂದು ಕನ್ನಡ ಚಿತ್ರರಂಗಕ್ಕೆ ದೇಶದಲ್ಲಿ ಮನ್ನಣೆ ಇದೆ, ಗೌರವ ಇದೆ ಅಂತ ನಗ್ನ ಸತ್ಯವನ್ನು ಹೊರಹಾಕಿದ್ರು.

ಅಷ್ಟೇ ಅಲ್ಲದೆ, ಸರ್ಕಾರದಲ್ಲಿ ಸಾಕಷ್ಟು ಯೋಜನೆಗಳು ಇವೆ. ಆದ್ರೆ ಅವ್ಯಾವೂ ಸಹ ನಿಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬರಲ್ಲ. ನೀವೇ ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು. ಹಸಿವಿದ್ದರೆ ಮಾತ್ರ ಊಟ ಸಿಗಲಿದೆ. ಪಾಸಿಟಿವ್ ಆಗಿ ನುಗ್ಗಬೇಕು ಅಂತ ಅಲ್ಲಿ ನೆರೆದಿದ್ದ ಎಲ್ಲರಲ್ಲೂ ಸ್ಫೂರ್ತಿಯನ್ನ ತುಂಬಿದ್ರು ನ್ಯಾಷನಲ್ ಸ್ಟಾರ್ ಯಶ್.

ಕೊನೆಯಲ್ಲಿ ಒಂದಷ್ಟು ಟಿಪ್ಸ್ ಕೂಡ ನೀಡಿದ ರಾಕಿಭಾಯ್, ಜೀವನದಲ್ಲಿನ ಚಿಕ್ಕ ಚಿಕ್ಕ ಖುಷಿಗಳನ್ನು ಸಂಭ್ರಮಿಸಿ ಅಂತ ಬದುಕಿನ ಪಾಠ ಮಾಡಿದ್ರು. ಜೀವನೋತ್ಸಾಹದ ನಿಜವಾದ ಅರ್ಥವನ್ನು ಸಾರಿದ್ರು. ಅದೇನೇ ಇರಲಿ, ಯಶ್ ಮಾತಿನಲ್ಲಿ ಒಂದು ಗತ್ತು ಇರಲಿದೆ, ಸಾರ ಇರಲಿದೆ. ಪಾಸಿಟಿವಿಟಿ ಎದ್ದು ಕಾಣಲಿದೆ. ಇದನ್ನ ಅರ್ಥೈಸಿಕೊಂಡವ್ರು ಅವ್ರನ್ನ ಲೈಫ್ ಗುರುವಾಗಿ ಪರಿಗಣಿಸಿದ್ರೂ ಅಚ್ಚರಿಯಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES