Wednesday, April 24, 2024

ಸಚಿವ ಹಾಗೂ ಶಾಸಕರನ್ನ ಘೇರಾವ್ ಹಾಕಿ ಗ್ರಾಮಸ್ಥರ ಆಕ್ರೋಶ.!

ಹುಬ್ಬಳ್ಳಿ : ದೇಶದಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ದತೆ ಭರದಿಂದ ಸಾಗಿದೆ. ಆದರೆ, ಧಾರವಾಡ ಜಿಲ್ಲೆಯ ಅಳ್ನಾವರ ಹಾಗೂ ಕಲಘಟಗಿ ವಿಧಾನಸಭೆ ಕ್ಷೇತ್ರದ ಕೆಲವು ಗ್ರಾಮಸ್ಥರು ಮಾತ್ರ ತಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಿ ಎಂದು ಸಚಿವರು ಹಾಗೂ ಶಾಸಕರನ್ನು ಘೇರಾವ್ ಹಾಕಿದ ಘಟನೆ ಇಂದು ನಡೆದಿದೆ.

ಧಾರವಾಡ ಜಿಲ್ಲೆಯ ಅಳ್ನಾವರ ವಿಧಾನಸಭಾ ಕ್ಷೇತ್ರದ ನಗಲಿ, ಚಿಕ್ಕ ಹುಬ್ಬರಿ, ಹೊಳ್ತಿಕೋಟಿ, ರಾಮಚಂದ್ರ ನಗರ, ಶಿವನಗರ, ಮಡಕಿಕೊಪ್ಪ, ನಿಂಗನಕೊಪ್ಪ, ಸಿಂಗಣಕೊಪ್ಪ, ಅಂಬೋಳಿ ಗ್ರಾಮಸ್ಥರು ಹಾಗೂ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಹವಳದ ಹಿಂಡಸಗೇರಿ ಸೇರಿದಂತೆ ಇನ್ನಿತರ ಗ್ರಾಮಸ್ಥರು ಸ್ವಾತಂತ್ರ್ಯ ಅಮೃತ ಮಹೋತ್ಸವ ತಯಾರಿಗೆ ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ ಗೆ ಬಂದಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕಲಘಟಗಿ ಶಾಸಕ ನಿಂಬಣ್ಣವವ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳ ಪಟ್ಟಿಯನ್ನು ಮುಂದಿಟ್ಟು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಸಚಿವರು ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಸರಿಯಾದ ರಸ್ತೆ, ಗಟಾರು, ವಿದ್ಯುತ್, ನೀರಿಲ್ಲ, ಇದರಿಂದ ಜನರು ಹೈರಾಣಾಗಿದ್ದಾರೆ. ಗ್ರಾಮದಲ್ಲಿದ್ದು ಜೀವನ ನಡೆಸುವುದು ದುಸ್ತರವಾಗಿದೆ. ಅದರಲ್ಲೂ ಮಕ್ಕಳು ಅಂಗನವಾಡಿಗಾಗಿ ದೂರದ ಊರುಗಳಿಗೆ ಹೋಗುವ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡು ಎಂದಿನಂತೆ ಮತ್ತೊಂದು ಮನವಿಯನ್ನ ಶಾಸಕರಿಗೆ ನೀಡಿ ನಿರಾಶರಾಗಿ ಹೋದರು

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆಯುತ್ತಾ ಬಂದಿವೆ. ಆದರೆ ನಮ್ಮ ಗ್ರಾಮಗಳು ಮಾತ್ರ ಅಭಿವೃದ್ಧಿಯಿಂದ ವಂಚಿತಗೊಂಡಿವೆ ಎಂದು ಅಸಮಾಧಾನಗೊಂಡರು. ಇದಕ್ಕೆ ಸಚಿವರು ಹಾಗೂ ಶಾಸಕರು ಆದಷ್ಟು ಬೇಗ ಈ ಕುರಿತು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ಭರವಸೆ ನೀಡಿ ಕೈ ತೊಳೆದುಕೊಂಡಿದ್ದಾರೆ.

ಇನ್ನು ಕಾಡಂಚಿನ ಹಳ್ಳಿಗಳಲ್ಲಿ ಇದುವರೆಗೂ ನಾಗರಿಕ ಜೀವನ ನಡೆಯುತ್ತಿಲ್ಲ ಎನ್ನುವುದು ಮತ್ತೊಮ್ಮೆ ಧಾರವಾಡ ಜಿಲ್ಲೆಯಲ್ಲಿ ಸಾಬೀತಾಗಿದೆ.

RELATED ARTICLES

Related Articles

TRENDING ARTICLES