Thursday, April 25, 2024

ಅಪರೂಪದ ಮದುವೆಗೆ ಸಾಕ್ಷಿಯಾದ ಬೆಳಗಾವಿ..!

ಬೆಳಗಾವಿ : ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ಮೂಗ ಯುವತಿ ಮತ್ತು ಕಿವುಡ ಯುವಕ ಮದುವೆಯಾಗಿದ್ದು, ಹೃದಯ ಮಾತನಾಡುವಾಗ ಬಾಯಿಯ ಅವಶ್ಯಕತೆ ಇಲ್ಲ ಎಂದು ಶಾಸಕ ಪಿ.ರಾಜೀವ್ ಹೇಳಿದ್ದಾರೆ.

ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಅಂತಾರೆ. ಯಾರ್ಯಾರ ಬಾಳಲ್ಲಿ ಯಾರ್ಯಾರು ಸಂಗಾತಿಯಾಗಬೇಕು ಅಂತಾ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತಂತೆ. ಆದ್ರೆ ಇಲ್ಲಿ ಎರಡು ಕುಟುಂಬಗಳು ತಮ್ಮ ಮೂಗ – ಕಿವುಡ ಮಕ್ಕಳ ಮದುವೆ ಆಗುತ್ತೋ ಇಲ್ವೋ ಅಂತಾ ಚಿಂತೆಯಲ್ಲಿದ್ದಾಗ ಮೂಗನೊಬ್ಬ ಆಪತ್ಬಾಂಧವನಾಗಿ ಬಂದಿದ್ದಾನೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ರಾಯಬಾಗ ತಾಲೂಕಿನ ಹಾರೂಗೇರಿ ನಿವಾಸಿ ಜ್ಯೋತೆಪ್ಪ ಉಮರಾಣಿ ನೆಚ್ಚಿನ ಮಗಳಾದ ಸ್ವಾತಿ ಮದುವೆ ಮಾಡಲು ಆಗದೇ ಕೊರಗುತ್ತಿದ್ದರು. ಕಾರಣ ಚೆಂದುಳ್ಳಿ ಚೆಲುವೆಯಂತಿದ್ದ ಸ್ವಾತಿಗೆ ಹುಟ್ಟಿನಿಂದ ಮಾತು ಬರಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಎಲ್ಲರ ಹಾಗೇ ಅದ್ಧೂರಿಯಾಗಿ ಮಗಳ ಮದುವೆ ಮಾಡಬೇಕೆಂದು ತಂದೆ ಜ್ಯೋತೆಪ್ಪ ತಾಯಿ ಪಾರ್ವತಿ ಕನಸು ಕಂಡು ಹಲವು ಕಡೆ ಸಂಬಂಧದ ಹುಡುಕಾಟದಲ್ಲಿ ತೊಡಗಿದ್ದರು. ಆದ್ರೆ ಮಾತು ಬರಲ್ಲ ಎಂಬ ಕಾರಣಕ್ಕೆ ಯಾರೂ ಮದುವೆಯಾಗಲು ಒಪ್ಪಿರಲಿಲ್ಲ.

ಮೂಗ ಯುವಕರು ಸಹ ತಾವು ಮೂಗ ಯುವತಿಯನ್ನೇ ಮದುವೆಯಾದ್ರೆ ಕಷ್ಟ ಆಗುತ್ತೆ ಅಂತಾ ಹಿಂದೇಟು ಹಾಕಿದ್ರು ಅನಿಸುತ್ತೆ. ಇದೇ ಕೊರಗಿನಲ್ಲಿದ್ದ ಇವರ ನೆರವಿಗೆ ಬಂದಿದ್ದು ಮತ್ತೋರ್ವ ಮೂಗ ಯೋಗೇಶ್ ಉಮರಾಣಿ. ಈ ಯೋಗೇಶ್ ಉಮರಾಣಿ ತನ್ನ ಸ್ನೇಹಿತ ಮುಗಳಖೋಡ ನಿವಾಸಿ ಸಿದ್ದುಗೆ ವಾಟ್ಸಪ್ ಮೂಲಕ ಫೋಟೋ ಬಯೋಡೇಟಾ ಕಳಿಸಿದ್ದಾನೆ. ಬಳಿಕ ಇಬ್ಬರ ಕುಟುಂಬಗಳು ಪರಸ್ಪರ ಒಪ್ಪಿ ಹಾರೂಗೇರಿಯಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ವಧುವಿನ ತಂದೆ ಜ್ಯೋತೆಪ್ಪಗೌಡ, ‘ಮಗಳ ಮದುವೆ ಲೇಟ್ ಆಗ್ತಿದೆ ಅಂತಾ ದುಃಖ ಆಗುತ್ತಿತ್ತು.

ಮಗಳನ್ನು ಮದುವೆ ಮಾಡಿಕೊಡಬೇಕೆಂದು ತೋರಿಸಿದಾಗ ಯಾರೂ ಹೆಚ್ಚು ಮುಂದೆ ಬಂದಿರಲಿಲ್ಲ. ಈಗ ಮದುವೆಯಾಗುತ್ತಿರೋದು ಖುಷಿ ತಂದಿದೆ ಎಂದರು‌‌. ಇನ್ನು ವಧುವಿನ ತಾಯಿ ಮದುವೆ ಆಗಿದ್ದು ಬಹಳ ಸಂತೋಷ ಆಗಿದೆ. ಮಾತನಾಡಲು ಬರದವರು ಬಂದು ಸಹಾಯ ಮಾಡಿ ಮದುವೆ ಮಾಡಿಸಿದ್ದಾರೆ. ಇನ್ನು ವಧುವಿನ ಸಹೋದರ ಸಂತೋಶ್ ಮಾತನಾಡಿ ಮಾತನಾಡಲು ಬರದವನೇ ಈ ಸಂಬಂಧ ಕೂಡಿಸಿದ್ದಾನೆ. ಇಂತಹ ಮದುವೆ ನಾನು ಜೀವನದಲ್ಲಿಯೇ ನೋಡಿಲ್ಲ. ವರನ ಸ್ನೇಹಿತ ಮೂಗನಿದ್ದಾನೆ. ಅವನೇ ಈ ಸಂಬಂಧ ಕೂಡಿಸಿದ್ದು ಇಬ್ಬರು ಚೆನ್ನಾಗಿರಲಿ ಅಂತಾ ಭಾವುಕರಾದರು.

ಇನ್ನು ವರನ ತಂದೆ ಗಿರಿಮಲ್ಲಪ್ಪ ಮುಧೋಳೆ ಮಾತನಾಡಿ ಉಮರಾಣಿ ಕುಟುಂಬದವರು ಬಡವರಿಗೆ ಕನ್ಯಾ ದಾನ ಮಾಡಿದ್ದಕ್ಕೆ ಹೆಮ್ಮೆ ಅನಿಸುತ್ತೆ. ಬಾಯಿ ಇದ್ದವಳ‌ನ್ನು ಮದುವೆ ಮಾಡಿದರೆ ಅನುಕೂಲ ಆಗುತ್ತೆ ಅಂತಾ ನೋಡಿದ್ವಿ ಆದರೆ ಸಕ್ಸಸ್ ಆಗಲಿಲ್ಲ. ಆದರೆ ಈಗ ಮಾತನಾಡಲು ಬರದವರು ಹೆಲ್ಪ್ ಮಾಡಿದಾರೆ. ಮೂಕ ಸ್ನೇಹಿತನಿಂದ ಸಹಾಯ ಆಯ್ತು ಎಂದಿದ್ದಾರೆ. ಇನ್ನು ಈ ಅಪರೂಪದ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಶಾಸಕ ಪಿ.ರಾಜೀವ್ ನವಜೋಡಿಗೆ ಶುಭ ಹಾರೈಸಿದರು.

ಇದೇ ವೇಳೆ ಮಾತನಾಡುತ್ತಾ, ‘ಹೃದಯದ ಅಂತರಾಳದಿಂದ ಭಾಗವಹಿಸಿದ ಮದುವೆ ಇದು. ಮಾತುಗಳು ಒಂದು ಹಂತಕ್ಕೆ ನಿಶಬ್ದ ಆಗುತ್ತೆ. ಬದುಕಿನ ಗುರಿ ಮೌನದ ಕಡೆ ಸಾಗುವಂತದ್ದು. ಹಾಗಾಗಿ ಮಾತಿಗಿಂತ ಮೌನಕ್ಕೆ ಬಹಳ ದೊಡ್ಡ ಶಕ್ತಿ, ಅರ್ಥ ಇದೆ. ಮೌನ ಎಲ್ಲವನ್ನೂ ಹೇಳುತ್ತೆ. ನಿಸರ್ಗ ಇವರಿಬ್ಬರನ್ನೂ ಆ ಹಂತದಲ್ಲಿಟ್ಟಿದೆ ಅಂತಾ ನಾನು ನೋಡ್ತೇನೆ. ಹೃದಯಗಳು ಮಾತನಾಡಲು ಪ್ರಾರಂಭವಾದಾಗ ಆಗ ಮನುಷ್ಯನಿಗೆ ಬಾಯಿಯ ಅವಶ್ಯಕತೆ ಬಹಳ ಕಡಿಮೆ ಆಗುತ್ತೆ. ನಾವು ಎಲ್ಲಾ ಕುಟುಂಬಗಳಲ್ಲಿ ಬಾಯಿಯ ಮಾತು ಕೇಳಬಹುದು. ಹೃದಯದ ಮಾತು ಕೇಳಬೇಕೆನಿಸಿದ್ರೆ ಇವರ ಜೊತೆ ಭಾಗಿಯಾಬೇಕು. ಇವರ ಬದುಕು ಮಾದರಿ ಬದುಕಾಗಲಿ.. ನಮಗೆಲ್ಲ ಆದರ್ಶವಾಗಿರಲಿ.. ನೂರ್ಕಾಲ ಸುಖ ಜೀವನ ಇವರಿಹೆ ಸಿಗಲಿ ಎಂದು ಶುಭಹಾರೈಸಿದರು.

ಅದೇನೇ ಇರಲಿ ತಮ್ಮ ಮಕ್ಕಳು ಮೂಗ ಕಿವುಡರಿದ್ದಾರೆ ಅಂತಾ ಕಣ್ಣೀರಿಡುತ್ತಿದ್ದ ತಂದೆ ತಾಯಂದಿರಿಗೆ ಆಪತ್ಬಾಂಧವನಾಗಿ ಬಂದು ಮದುವೆ ಮಾಡಿಸಿದ ಮತ್ತೋರ್ವ ಮೂಗ ಯೋಗೇಶ್ ಉಮರಾಣಿಗೆ ಎರಡು ಕುಟುಂಬಗಳು ಧನ್ಯವಾದ ತಿಳಿಸಿದ್ದಾರೆ. ಮಾತು ಬರದಿದ್ರೆ ಏನಾಯ್ತು? ಈ ಜೋಡಿ ಹೃದಯದ ಮಾತುಗಳನ್ನು ಪರಸ್ಪರ ಕೇಳಿಕೊಂಡು ಸುಖದಾಯಕ ಜೀವನ ಸಾಗಿಸಲಿ ಎಂಬುದು ಸಾರ್ವಜನಿಕರ ಆಶಯ.

RELATED ARTICLES

Related Articles

TRENDING ARTICLES