Saturday, April 20, 2024

ಜಾಗ ಒತ್ತುವರಿ ಆರೋಪ: ಮಸೀದಿ ತೆರವಿಗೆ ಬಿಬಿಎಂಪಿಯಿಂದ ನೋಟೀಸ್​

ಬೆಂಗಳೂರು: ಚಾಮರಾಜಪೇಟೆ ಮೈದಾನದ ಕಿಚ್ಚು ಆರುವ ಮುನ್ನವೇ ಈಗ ಮತ್ತೊಂದು ವಿವಾದದ ಕಿಚ್ಚು ಹೊತ್ಕೊಂಡಿದೆ. ವಿಜಯನಗರದಲ್ಲಿರೋ ಮಸ್ ಜಿದ್ ಎ ಅಲ್ ಖುಬಾ ಎಂಬ ಮಸೀದಿಯನ್ನು ಡೆಮಾಲಿಷನ್ ಮಾಡಲು ಬಿಬಿಎಂಪಿ ನೋಟೀಸ್ ನೀಡಿದೆ.

ಇದು ಮಸ್ ಜಿದ್ ಎ ಅಲ್ ಖುಬ ಮಸೀದಿ.. ವಿಜಯನಗರದಲ್ಲಿರೋ ಮಸೀದಿ. ಈ ಕಟ್ಟಡವನ್ನು ಈಗ ಡೆಮಾಲಿಷನ್ ಮಾಡಲು ಬಿಬಿಎಂಪಿ ನೋಟೀಸ್ ನೀಡಿದೆ. ಯಾಕಂದ್ರೆ ಈ‌ ಮಸೀದಿಯೂ ಸಾರ್ವಜನಿಕರ ಓಡಾಟಕ್ಕೆ ಮೀಸಲಿಟ್ಟ ಐದು ಅಡಿ ಪ್ಯಾಸೇಜ್ ನ ಒತ್ತುವರಿ ಮಾಡ್ಕೊಂಡು ಕಟ್ಟಲಾಗಿದೆ ಎನ್ನಲಾಗಿದೆ. ಈಗ ಒತ್ತುವರಿ ಮಾಡಿ ನಿರ್ಮಿಸಿರುವ ಭಾಗವನ್ನ ತೆರವು ಮಾಡಿ ಬಿಬಿಎಂಪಿ ವಶಕ್ಕೆ ಪಡೆಯಲು ಪ್ರಾದೇಶಿಕ ಆಯುಕ್ತರು ಬಿಬಿಎಂಪಿಗೆ ಆದೇಶ ಮಾಡಿದ್ದಾರೆ. ಇದೇ ಆದೇಶದ ಅನುಸಾರ ಬಿಬಿಎಂಪಿ ಮಸೀದಿಗೆ ಡೆಮಾಲಿಷನ್ ಆರ್ಡರ್ ನೀಡಿದ್ದು. ಒತ್ತುವರಿ ಮಾಡಲಾಗಿದೆ ಎಂಬ ಭಾಗವನ್ನು ತೆರವು ಮಾಡಲು ಮಸ್ ಜಿದ್ ಎ ಅಲ್ ಖುಬ ಮಸೀದಿಯ ಮುಖ್ಯಸ್ಥರಿಗೆ ಬಿಬಿಎಂಪಿ ನೋಟೀಸ್ ಜಾರಿ ಮಾಡಿದೆ.

ವಿಜಯನಗರದ ಈ ಮಸೀದಿ ನಿರ್ಮಾಣ ಆಗಿರೋದು ನಿವೇಶನ ಸಂಖ್ಯೆ13 ಹಾಗೂ 15 ರಲ್ಲಿ , ಮಸೀದಿ ನಿರ್ಮಾಣಕ್ಕೆ ನಿವೇಶನ ಸಂಖ್ಯೆ 13 ರ ಮಾಲೀಕರಾಗಿದ್ದ ಪಿ.ಬಾಷಾ ಒಂದು ಟ್ರಸ್ಟ್ ಗೆ ಬರೆದುಕೊಟ್ಟಿದ್ರು. ನಂತರ ನಿವೇಶನ ಸಂಖ್ಯೆ15 ರ ಮಾಲೀಕರು ಅಮೀನಾ ಎಂಬುವವರು ಕೂಡಾ ನಿವೇಶನವನ್ನು ಮಸೀದಿಗೆ ನೀಡಿದ್ದಾರೆ‌. ಈ ಎರಡು ನಿವೇಶನಗಳನ್ನು ಒಂದುಗೂಡಿಸಿ ಮಸೀದಿ ನಿರ್ಮಾಣ ಮಾಡಲಾಗಿದೆ. ಆದ್ರೆ, ಎರಡು ಸೈಟ್ ಗಳ ಮಧ್ಯೆ ನಿವೇಶನ ಸಂಖ್ಯೆ14 ಕೂಡಾ ಇತ್ತಂತೆ. ಅದನ್ನು ಒತ್ತುವರಿ ಮಾಡ್ಕೊಂಡು ಮಸೀದಿ ನಿರ್ಮಾಣ ಮಾಡಲಾಗಿದೆಯಂತೆ. ನಿವೇಶನ ಸಂಖ್ಯೆ 14 ,5.5 ಅಡಿ ಅಗಲ ಹಾಗೂ 45 ಅಡಿ ಉದ್ದವಿತ್ತು. ಸಾರ್ವಜನಿಕರ ಓಡಾಟಕ್ಕೆ ಪ್ಯಾಸೇಜ್ ಇತ್ತಂತೆ. ಅದನ್ನು ಒತ್ತುವರಿ ಮಾಡಿ ಮಸೀದಿ ನಿರ್ಮಾಣ ಮಾಡಲಾಗಿದೆ. ಆದ್ರೆ, ಇದಕ್ಕೆ ಹಿಂದೆ ಬಿಬಿಎಂಪಿ ಖಾತಾ ಕೂಡಾ ಮಾಡಿಕೊಟ್ಟಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ವಾದ ಪ್ರತಿವಾದಗಳು ನಡೆದು ಅಂತಿಮ ಆದೇಶ ಹೊರಡಿಸಲಾಗಿದೆ.

ಅದರಂತೆ ನಿವೇಶನ ಸಂಖ್ಯೆ 14 ರ ಐದು ಅಡಿ ಜಾಗ ಪಾಲಿಕೆ ಸ್ವತ್ತೆಂದು, ಸಾರ್ವಜನಿಕರ ಸ್ವತ್ತೆಂದು ಘೋಷಣೆ ಮಾಡಿದ್ದು, ತಕ್ಷಣ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿಗೆ ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದಾರೆ. ಅದರಂತೆ ಬಿಬಿಎಂಪಿ ಕೂಡಾ ಮಸೀದಿಗೆ ಡೆಮಾಲಿಷನ್ ನೋಟೀಸ್ ಜಾರಿ ಮಾಡಿದೆ.

ಈಗ ಬಿಬಿಎಂಪಿ ಒತ್ತುವರಿ ಎನ್ನಲಾದ ಜಾಗವನ್ನು ಡೆಮಾಲಿಷನ್ ಮಾಡಿದ್ರೆ ಮಸೀದಿಯ ಮಧ್ಯ ಭಾಗವನ್ನು ಒಡೆದು ಹಾಕಬೇಕು. ಅಲ್ಲಿಗೆ ಮಸೀದಿ ಸಂಪೂರ್ಣವಾಗಿ ಡೆಮಾಲಿಷನ್ ಆಗುತ್ತೆ. ಆದರೆ, ಇದಕ್ಕೆ ಕೆಲ ಸ್ಥಳೀಯ ಜನ ನಾಯಕರು ಅವಕಾಶ ನೀಡ್ತಿಲ್ಲ. ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದು, ಡೆಮಾಲಿಷನ್‌ಗೆ ತಡೆ ನೀಡಿದ್ದಾರಂತೆ. ಈಗ ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಒತ್ತುವರಿ ಜಾಗವನ್ನು ಡೆಮಾಲಿಷನ್ ಮಾಡಬೇಕು ಅಂತಾ ಸ್ಥಳೀಯ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿವೆ.

ಒಟ್ನಲ್ಲಿ,, ಮಸೀದಿ ಡೆಮಾಲೀಷನ್ ಬಗ್ಗೆ ಮಸೀದಿ ಮುಖಂಡರು ನಮ್ಮ ಬಳಿ ಎಲ್ಲಾ ದಾಖಲೆಗಳು ಇದೆ ಅಂತಾ ವಾದ ಮಾಡ್ತಿದ್ದಾರೆ, ಆದ್ರೆ ಬಿಬಿಎಂಪಿ ಮಸೀದಿಗೆ ನೀಡಿದ್ದ ಖಾತಾವನ್ನು ಈಗಾಗಲೇ ರದ್ದು ಮಾಡಿದೆ. ಸದ್ಯ ಮಸೀದಿ‌ ಕೆಡವಲು ಹಲವು ಹೋರಾಟಗಾರರು ಪಟ್ಟು ಹಿಡಿದಿದ್ರೆ. ಮಸೀದಿ ಮಾಲೀಕರು ಕಾನೂನು ಹೋರಾಟಕ್ಕೆ ಸಜ್ಜಾಗಿದ್ದು, ಇನ್ನು ಯಾವೆಲ್ಲಾ ಬೆಳವಣಿಗೆಗಳಾಗುತ್ತೋ ಅಂತ ಕಾದು ನೋಡ್ಬೇಕಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES