Saturday, April 20, 2024

ಜನ್ಮದಿನ ಆಚರಿಸಿ ಬರುವಾಗ ಜವರಾಯನ ಅಟ್ಟಹಾಸ

ಕಲಬುರಗಿ : ಧಗಧಗನೇ ಹೊತ್ತಿ ಉರಿಯುತ್ತಿರುವ ಖಾಸಗಿ ಬಸ್. ಸುಟ್ಟು ಕರಕಲಾಗಿರೋ ಮೃತದೇಹಗಳು ಕಣ್ಣೆದುರೇ ತಮ್ಮವರು ಬೆಂಕಿಗಾಹುತಿಯಾಗ್ತಿರೋದನ್ನು ಕಂಡು ಗೋಳೊ ಎನ್ನುತ್ತಿರುವ ಸಂಬಂಧಿಕರು ಈ ದೃಶ್ಯಗಳನ್ನ ನೋಡಿದ್ರೆ ಎಂಥವರಿಗೂ ಕರುಳು ಚುರ್​ ಅನ್ನದೇ ಇರದು ಅಯ್ಯೋ ಪಾಪ ಎಂಬ ಉದ್ಘಾರ ಬರದೇ ಇರದು. ಈ ಭೀಕರ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕಲಬುರಗಿ ಜಿಲ್ಲೆ.

ಖಾಸಗಿ ಬಸ್ ಮತ್ತು ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 7 ಜನ ಸುಟ್ಟು ಕರಕಲಾದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪೂರ ಪಟ್ಟಣದ ಹೊರವಲಯದ ಬಳಿ ನಡೆದಿದೆ. ಅತಿವೇಗವಾಗಿ ಬಂದ ಗೂಡ್ಸ್ ಗಾಡಿಗೆ ಖಾಸಗಿ ಬಸ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಬಸ್ ಕಂದಕಕ್ಕೆ ಉರುಳಿ ಬಿದ್ದಿತ್ತು. ಬೆಳ್ಳಂ ಬೆಳಿಗ್ಗೆಯೇ ಜವರಾಯನ ಅಟ್ಟಹಾಸಕ್ಕೆ 7 ಜನ ಸಾವನ್ನಪ್ಪಿದ್ದಾರೆ. ಬಸ್​ನಲ್ಲಿದ್ದವರೆಲ್ಲ ಹೈದರಾಬಾದ್​ನ ಸಿಕಂದ್ರಾಬಾದ್​ ನಿವಾಸಿಗಳಾಗಿದ್ದು, 2 ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಎಂಜಿನಿಯರ್ ಅರ್ಜುನ್‌ ಕುಮಾರ್‌ ಎಂಬುವರ ಮಗನ ಜನ್ಮ ದಿನಾಚರಣೆಗೆ ಗೋವಾಗೆ ಕುಟುಂಬಸ್ಥರೆಲ್ಲಾ ತೆರಳಿದ್ದರು. ನಿನ್ನೆ ಜನ್ಮ ದಿನ ಆಚರಿಸಿ ವಾಪಸ್ ಆಗುತ್ತಿರುವಾಗ ಅಪಘಾತ ಸಂಭವಿಸಿದೆ.

ಹೊತ್ತಿ ಉರಿಯುತ್ತಿದ್ದ ಬಸ್‌ನಿಂದ ಮೂವರನ್ನು ರಕ್ಷಿಸುವಲ್ಲಿ ಸ್ಥಳೀಯ ಯುವಕನೊಬ್ಬ ಯಶಸ್ವಿಯಾಗಿದ್ದಾನೆ. ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಡೀಸೆಲ್​ ಟ್ಯಾಂಕ್ ಡ್ಯಾಮೇಜ್ ಆಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ‌, ಬಸ್ ನಲ್ಲಿ ಸಿಲುಕಿದ್ದ ಸುಮಾರು ಜನ ಬಸ್ ಅಡಿಯಿಂದ ಹರಸಾಹಸ ಪಟ್ಟು ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಪ್ರಾಣಾಪಾಯದಿಂದ ಪಾರಾದ್ರೂ ಕೂಡ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಿಕಂದ್ರಾಬಾದ್​ ನಿವಾಸಿಗಳಾದ ಎಂಜಿನಿಯರ್ ಅರ್ಜುನಕುಮಾರ್​, ಅವರ ಪತ್ನಿ ಸರಳಾದೇವಿ, ಪುತ್ರ ಬಿವಾನ್, ದೀಕ್ಷಿತ್, ಅನಿತಾ ರಾಜು, ಶಿವಕುಮಾರ ಮತ್ತು ಇವರ ಪತ್ನಿ ರವಾಲಿ ಅಪಘಾತದಲ್ಲಿ ಸಜೀವ ದಹನವಾಗಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಜವರಾಯ ಯಾವಾಗ ಎಲ್ಲಿ ಹೇಗೆ ಬಂದೆರಗುತ್ತಾನೋ ಗೊತ್ತಿಲ್ಲ. ಹುಟ್ಟುಹಬ್ಬ ಆಚರಣೆ ಮಾಡಲು ಹೋಗಿ ಇಡೀ ಕುಟುಂಬವೇ ಮಸಣ ಸೇರಿದ್ದು ನಿಜಯಕ್ಕೂ ವಿಪರ್ಯಾಸ.

RELATED ARTICLES

Related Articles

TRENDING ARTICLES