Tuesday, April 23, 2024

ಪಿ ಚಿದಂಬರಂ, ಕಾರ್ತಿ ಅವರಿಗೆ ಸೇರಿದ ಸ್ಥಳಗಳ ಮೇಲೆ ಸಿಬಿಐ ದಾಳಿ

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ಮಂಗಳವಾರ ದಾಳಿ ನಡೆಸಿದೆ. ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಸ್ಥಳಗಳಲ್ಲಿ ಈ ಪರಿಶೀಲನೆ ನಡೆದಿದೆ. ಕಾರ್ತಿ ಅವರ ತಂದೆ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರ ಮನೆಯ ಮೇಲೆಯೂ ದಾಳಿ ನಡೆಸಲಾಗಿದೆ. ಚೆನ್ನೈ, ಮುಂಬಯಿ, ಒಡಿಶಾ ಮತ್ತು ದಿಲ್ಲಿಯ ವಿವಿಧೆಡೆ ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ರಾಜ್ಯಸಭೆ ಸಂಸದ ಪಿ ಚಿದಂಬರಂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯೇ ಅಲ್ಲದ ತಮ್ಮ ಮನೆಯ ಮೇಲೆ ದಾಳಿ ನಡೆಸಿದ್ದಕ್ಕೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಾವು ಎರಡನೇ ಅವಧಿಗೆ ರಾಜ್ಯಸಭೆ ಸಂಸದರಾಗಿ ಆಯ್ಕೆಯಾಗಲು ಸಿದ್ಧತೆ ನಡೆಸುತ್ತಿರುವ ವೇಳೆಯೇ ದಾಳಿ ನಡೆದಿರುವುದಕ್ಕೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಚೆನ್ನೈಯಲ್ಲಿರುವ ತಮ್ಮ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳ ತಂಡ ಶೋಧಕಾರ್ಯ ನಡೆಸಿದ್ದು ದೆಹಲಿಯಲ್ಲಿರುವ ತಮ್ಮ ಕಚೇರಿಯಲ್ಲಿ ಕೂಡ ತಪಾಸಣೆ ನಡೆಸಿದ್ದಾರೆ, ಆದರೆ ಏನೂ ಸಿಕ್ಕಿಲ್ಲ,ಸಿಬಿಐ ಅಧಿಕಾರಿಗಳು ಯಾವುದನ್ನೂ ವಶಪಡಿಸಿಕೊಂಡಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಸ್ಪಷ್ಟಪಡಿಸಿದ್ದಾರೆ.

ಸಿಬಿಐ ಅಧಿಕಾರಿಗಳ ಶೋಧ ಕಾರ್ಯ ಬಹಳ ಆಸಕ್ತಿಕರವಾಗಿತ್ತು ಎಂದು ಚಿದಂಬರಂ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಿಬಿಐ ಅಧಿಕಾರಿಗಳ ತಂಡವು ನನಗೆ ಎಫ್‌ಐಆರ್ ತೋರಿಸಿತು. ಅದರಲ್ಲಿ ನನ್ನನ್ನು ಆರೋಪಿ ಎಂದು ಹೆಸರಿಸಿಲ್ಲ, ಹುಡುಕಾಟ ವೇಳೆ ಅವರಿಗೆ ಏನೂ ಸಿಕ್ಕಿಲ್ಲ, ಏನನ್ನೂ ವಶಪಡಿಸಿಕೊಂಡಿಲ್ಲಆದರೆ ಶೋಧನೆಯ ಸಮಯವು ಆಸಕ್ತಿಕರವಾಗಿತ್ತು ಎಂದಷ್ಟೇ ನಾನು ಹೇಳಬಲ್ಲೆ ಎಂದು ತಿಳಿಸಿದ್ದಾರೆ.

2011ರಲ್ಲಿ ಅಕ್ರಮವಾಗಿ 50 ಲಕ್ಷ ರೂಪಾಯಿ ಪಡೆದು 250 ಚೀನಿ ಪ್ರಜೆಗಳಿಗೆ ವೀಸಾ ಸೌಲಭ್ಯ ಕಲ್ಪಿಸಿದ ಆರೋಪದ ಮೇಲೆ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಹೊಸ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಕಾರ್ತಿ ಚಿದಂಬರಂ ಅವರ ಚೆನ್ನೈ ಮತ್ತು ದೆಹಲಿಯ ನಿವಾಸಗಳು ಸೇರಿದಂತೆ ದೇಶದ ಅನೇಕ ನಗರಗಳ 10 ಕಡೆಗಳಲ್ಲಿ ಸಂಘಟಿತ ಶೋಧ ಕಾರ್ಯಾಚರಣೆಯನ್ನು ನಡೆಸಿತು. ಚೆನ್ನೈಯ ಲೋಧಿ ಎಸ್ಟೇಟ್‌ನಲ್ಲಿರುವ ಕಾರ್ತಿ ಚಿದಂಬರಂ ಮತ್ತು ರಾಜ್ಯಸಭಾ ಸಂಸದ ಪಿ ಚಿದಂಬರಂ ಅವರ ಅಧಿಕೃತ ನಿವಾಸಕ್ಕೂ ಸಿಬಿಐ ತಂಡ ಭೇಟಿ ನೀಡಿತು.

RELATED ARTICLES

Related Articles

TRENDING ARTICLES