Friday, April 19, 2024

ಸಾಹಿತಿ ಕೆ.ಎಸ್.ಭಗವಾನ್​ರ ‘ಸಮಸದ್ವಿವೇಕ’ ಬಿಡುಗಡೆ

ಮೈಸೂರು: ಇಂದು ಮೈಸೂರಿನ ವಿಜ್ಷಾನಭವನದಲ್ಲಿ ಅಪರೂಪದ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕೆ.ಎಸ್.ಭಗವಾನ್​ರ ಜೀವನ ಮತ್ತು ಸಾಧನೆ ಕುರಿತಾದ ಸಮಸದ್ವಿವೇಕ ಎಂಬ ಭಗವಾನ್ ಬಗೆಗಿನ ಈ ಅಭಿನಂದನಾ ಗ್ರಂಥವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ಮೈಸೂರಿನ ಅಸ್ಮಿತೆ ಮಾನಸ ಗಂಗೋತ್ರಿಯ ವಿಜ್ಷಾನಭವನದಲ್ಲಿ ನಡೆದ ಈ ಅಪರೂಪದ ಕಾರ್ಯಕ್ರಮದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಒಂದು ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಜನರು ಕೂರಲು ಜಾಗ ಸಿಗದೆ ನಿಂತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಆದರೆ ಬಂದಿದ್ದವರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಜನರು ಸಿದ್ದು ಅಭಿಮಾನಿಗಳು ಎಂಬುದು ಸಿದ್ದರಾಮಯ್ಯ ಭಾಷಣ ಮುಗಿಯುತ್ತಿದ್ದಂತೆಯೇ ಕಾರ್ಯಕ್ರಮದ ಸಮಾರೋಪ ಭಾಷಣದ ಮೊದಲೇ ಎದ್ದು ತಾವಾಗೇ ಕಾರ್ಯಕ್ರಮವನ್ನು ಮುಗಿಸಿದ್ದರಿಂದ ಗೊತ್ತಾಯಿತು!

ಚಿಕ್ಕದಾಗಿ ಚೊಕ್ಕದಾಗಿ ನಡೆದ ಈ ಕಾರ್ಯಕ್ರಮದಲ್ಲಿ ಭಗವಾನ್ ಬಗೆಗಿನ ಜೀವನ ಮತ್ತು ಸಾಧನೆ ಕುರಿತಾಗಿ ಅವರ ಶಿಷ್ಯ ಹಾಗೂ ಲೇಖಕ, ವಿಮರ್ಶಕ ಪ್ರೊಫೆಸರ್ ಸಿ.ನಾಗಣ್ಣ ತಮ್ಮ ಹಳೆಯ ನೆನಪುಗಳನ್ನು ಕೆದಕುವುದರೊಂದಿಗೆ ಪುಸ್ತಕದ ಬಗ್ಗೆ ಮಾತನಾಡಿದರು. ಈ ಕೃತಿಯಲ್ಲಿ ಬಿ.ಟಿ.ಲಲಿತಾನಾಯಕ್ ಬರೆದ ಲೇಖನದ ಬಗ್ಗೆಯೂ ಪ್ರಸ್ತಾಪಿಸಿದ ಅವರು ಲಲಿತಾನಾಯಕ್ ಭಗವಾನ್ ಕೃತಿಗಳನ್ನು ಓದಿ ಯಾವ ರೀತಿ ಪ್ರಭಾವಿತರಾಗಿದ್ದರು ಎಂಬುದನ್ನು ಹೇಳಿದರು. ಸಮಾರಂಭದಲ್ಲಿ ಅತಿಥಿಯಲ್ಲದಿದ್ದರೂ ಲಲಿತಾನಾಯಕ್ ಬೆಂಗಳೂರಿನಿಂದ ಮೈಸೂರಿಗೆ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಸಿದ್ದರಾಮಯ್ಯ ಮಾತನಾಡಿ ಭಗವಾನ್ ಒಬ್ಬ ಮಹಾನ್ ಚಿಂತಕ, ಸಮಾಜಕ್ಕೆ ಇಂಥ ಚಿಂತಕರ ಅವಶ್ಯಕತೆಯಿದೆ ಎಂದರು. ಇಂದು ಮೂಢನಂಬಿಕೆ ಎಲ್ಲೆಡೆ ತಾಂಡವವಾಡುತ್ತಿದೆ, ವೈಜ್ಷಾನಿಕ ಮನೋಭಾವ ಬೆಳೆಸಿಕೊಳ್ಳುವುದು ಅವಶ್ಯಕ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ನೂತನ ವಿಧಾನ ಪರಿಷತ್ ಸದಸ್ಯರಾದ ಡಾ.ಡಿ ತಿಮ್ಮಯ್ಯನವರಿಗೆ ಸನ್ಮಾನಿಸಲಾಯಿತು.

RELATED ARTICLES

Related Articles

TRENDING ARTICLES