Saturday, April 20, 2024

ಇಸ್ರೋಗೆ ಹೊಸ ಸಾರಥಿ ರಾಕೆಟ್​ ವಿಜ್ಞಾನಿ ಎಸ್​ ಸೋಮನಾಥ್​

ಇಸ್ರೋ ಇದು ಭಾರತೀಯರ ಪಾಲಿಗೆ ಹೆಮ್ಮೆಯ ಪ್ರತೀಕ, ವಿಶ್ವ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವವನ್ನ ಪಡೆದಿರುವ ಇಸ್ರೋ ಹಲವು ದೇಶಗಳಿಗೆ ತೀವ್ರವಾದ ಸ್ಪರ್ಧೆಯನ್ನ ಕೂಡ ನೀಡುತ್ತಿದೆ. ಅಷ್ಟರ ಮಟ್ಟಿಗೆ ಇವತ್ತು ಇಸ್ರೋ ಜಾಗತಿಕವಾಗಿ ತನ್ನ ಶಕ್ತಿ ಏನು ಅನ್ನೋದನ್ನ ತೋರಿಸಿಕೊಂಡು ಬಂದಿದೆ. ಇದೀಗ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನಷ್ಟು ದಾಖಲೆಗಳನ್ನಬರೆಯೋದಕ್ಕೆ ಸಿದ್ಧವಾಗಿದ್ದು ಅದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನ ಮಾಡಿಕೊಂಡು ಬಂದಿದೆ. ಇದೀಗ ಈ ಹೊತ್ತಿನಲ್ಲೇ ಇಸ್ರೋದಲ್ಲಿ ಮಹತ್ವದ ಬದಲಾವಣೆ ನಡೆದಿದ್ದು, ಇದೀಗ ಇಸ್ರೋಗೆ ಹೊಸ ಸಾರಥಿಯಾಗಿ ರಾಕೆಟ್​​ ವಿಜ್ಞಾನಿ ಎಸ್​ ಸೋಮನಾಥ್​ ಆಯ್ಕೆಯಾಗಿದ್ದಾರೆ.

ದೇಶದ ಪ್ರಸಿದ್ಧ ರಾಕೆಟ್‌ ವಿಜ್ಞಾನಿಯಾದ ಎಸ್‌.ಸೋಮನಾಥ್‌ ಅವರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಹಾಲಿ ಇಸ್ರೋ ಅಧ್ಯಕ್ಷರಾಗಿದ್ದ ಕೆ.ಶಿವನ್‌ ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ಸೋಮನಾಥ್‌ ತುಂಬಲಿದ್ದಾರೆ. ಸದ್ಯಕ್ಕೆ  ಎಸ್‌.ಸೋಮನಾಥ್‌ ಅವರು  ತಿರುವನಂತಪುರಂನಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಡಾವಣಾ ವಾಹನದ ವಿನ್ಯಾಸ ಮತ್ತು ರಾಕೆಟ್‌ ಸಮನ್ವಯತೆ ರೂಪಿಸುವುದರಲ್ಲಿ ಚಾಣಕ್ಯರಾಗಿರುವ ಸೋಮನಾಥ್​, ಇದೀಗ 3 ವರ್ಷದ ಅವಧಿಗೆ ಇಸ್ರೋದ ಮುಖ್ಯಸ್ಥ ಹಾಗು ಬಾಹ್ಯಕಾಶ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

2015ರಲ್ಲಿ 2 ವರ್ಷಗಳ ಕಾಲ ಲಿಕ್ವಿಡ್‌ ಪ್ರೊಪಲ್ಶನ್‌ ಸಿಸ್ಟಮ್‌ ಸೆಂಟರ್‌ನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಸೋಮನಾಥ್, 2018 ಜನವರಿ 22ರಿಂದ ವಿಎಸ್‌ಎಸ್‌ಸಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಮೊದಲಿಂದಲೂ ರಾಕೇಟ್​ ಸೈನ್ಸ್​ ಮೇಲೆ ಅತೀವವಾದ ಆಸಕ್ತಿಯನ್ನ ಹೊಂದಿದ್ದ ಸೋಮನಾಥ್​, ಕೇರಳದ ಎರ್ನಾಕುಲಂನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು, ಬಳಿಕ ಕೇರಳ ವಿಶ್ವವಿದ್ಯಾಲಯದಿಂದ ಮೆಕಾನಿಕಲ್‌ ಎಂಜಿನಿಯರ್‌ ಪದವಿ ಪಡೆದ ಅವರು ಬೆಂಗಳೂರಿನ ಐಐಎಸ್‌ಸಿಯಲ್ಲಿ ಎರೋಸ್ಪೇಸ್‌ ಎಂಜಿನಿಯರಿಂಗ್‌ ಸ್ನಾತಕೋತ್ತರ ಪದವಿ ಪಡೆದ್ರು, ಇದಾದ ಬಳಿಕ  ಇಸ್ರೋದಲ್ಲಿ ಕೆಲಸ ಮಾಡಲು ಅವಕಾಶ ಪಡೆದ ಸೋಮನಾಥ್. ಉಡಾವಣಾ ವಾಹನಗಳ ಕುರಿತು ಅನೇಕ ಸಂಶೋಧನೆಗಳನ್ನು ನಡೆಸಿದ್ದರು. ಇದೇ ವೇಳೆ ಇಸ್ರೋದ ಬಹುದೊಡ್ಡ ಯೋಜನೆಯಾದ ಮೂರು ಹಂತದ ರಾಕೆಟ್‌ ಜಿಎಸ್‌ಎಲ್‌ವಿ ಮಾರ್ಕ್-3ಯ ಯೋಜನಾ ನಿರ್ದೇಶಕರಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದರು.

ಇದೀಗ 10 ನೇ ಇಸ್ರೋ ಅಧ್ಯಕ್ಷರಾಗಿ ಸೋಮನಾಥ್​ಗೆ, ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಅವರ ಮುಂದೆ ದೊಡ್ಡ ಸವಾಲುಗಳ ಸರ ಮಾಲೇಯೇ ಎದುರಾಗಲಿದೆ. ಉಡಾವಣೆ ವೈಫಲ್ಯಗಳು, ಕೊವಿಡ್ -19 ಏರಿಕೆಯಿಂದಾಗಿ ಏಕಾಏಕಿ ಹಿನ್ನಡೆ ಅನಭವಿಸಿದ ಇಸ್ರೋದ ಹಲವು ಯೋಜನೆಗಳು, ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮ. ಸೇರಿದ ಹಾಗೆ ಇನ್ನು ಹಲವು ಮಹತ್ತರವಾದ ಜವಬ್ದಾರಿಗಳು ಅವರ ಮುಂದೆ ಇವೆ. ಇತ್ತೀಚಿನ ದಿನಗಳಲ್ಲಿ ಮಾನವನ ಹಾರಾಟಕ್ಕೆ ಉಪಯೋಗವಾಗುವಂತೆ ಮಾಡುವಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. GSLV Mk III ಒಂದು ಇಂಟೆಲಿಜೆಂಟ್ ಸಿಸ್ಟಂ ಆಗಿದ್ದು ಇವುಗಳ ಬಗ್ಗೆ ಕೂಡ ಸಂಶೋಧನೆ ನಡೆಸ ಬೇಕಾಗಿದೆ.  ಹಾಗಾಗಿ ಇವುಗಳ ಬಗ್ಗೆಯೂ ಕೂಡ ತೀವ್ರವಾದ ಸಂಶೋಧನೆಗಳು ನಡೆಯುತ್ತಿದೆ. ಒಂದು ವೇಳೆ GSLV-Mk III ನ ಹ್ಯೂಮನ್-ರೇಟೆಡ್ ಆವೃತ್ತಿಯನ್ನು ಕ್ರ್ಯೂ ಮಾಡ್ಯೂಲ್ ಜೊತೆಗೆ ಪರೀಕ್ಷಿಸಿ ಯಶಸ್ವಿಯಾದರೆ. 2024 ರ ಮೊದಲು ಮಾನವ ಬಾಹ್ಯಾಕಾಶ ಹಾರಾಟದ ಬಗ್ಗೆ ಇರುವ ಭಾರತೀಯರ ಕನಸ್ಸು ನನಸ್ಸಾಗಲಿದೆ.

ಒಟ್ಟಾರೆಯಾಗಿ ಈ ಹಿಂದೆ ಹಲವು ಸವಾಲುಗಳನ್ನ ಎದುರಿಸಿ ಯಶಸ್ವಿಯಾಗಿದ್ದ ಸೋಮನಾಥ್, ಈಗ ಇಸ್ರೋದ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಇದೀಗ ಎಸ್​. ಸೋಮನಾಥ್​ ಅವರ ಮುಂದೆ ಹಲವು ಕಠಿಣ ಸವಾಲುಗಳಿದೆ. ಅವೆಲ್ಲವನ್ನ ಕೂಡ ಅವರು ಯಶಸ್ವಿಯಾಗಿ ನಿಭಾಯಿಸಲಿ, ಆ ಮೂಲಕ ಭಾರತದ ವೈಜ್ಞಾನಿಕ ಕ್ಷೇತ್ರಕ್ಕೆ ಅವರ ಸೇವೆ ಮತ್ತಷ್ಟು ಬಲ ತುಂಬಲಿ  ಅನ್ನೋದೇ ಎಲ್ಲರ ಆಶಯವಾಗಿದೆ.

ಲಿಖಿತ್​​ ರೈ , ಪವರ್​​ ಟಿವಿ

RELATED ARTICLES

Related Articles

TRENDING ARTICLES