ಹುಬ್ಬಳ್ಳಿ : ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅತಿ ಹೆಚ್ಚು ಜನರು ಮತ ಹಾಕಿದ್ದಾರೆ. ರಾಜ್ಯದ ಜನ ಬಿಜೆಪಿಯ ಮೇಲೆ ವಿಶ್ವಾಸವನ್ನ ಕಳೆದುಕೊಂಡಿದ್ದಾರೆ. ಎರಡೂ ಸರ್ಕಾರದ ವೈಫಲ್ಯಗಳನ್ನ ನೋಡಿ ಜನತೆ ಬೇಸತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವದ ಅಭಿಯಾನವನ್ನ ಹಮ್ಮಿಕೊಂಡಿದ್ದೇವೆ. ಜನರಲ್ಲಿ ಜಾಗೃತಿ ಮಾಡುವ ಕೆಲಸವನ್ನ ನಾವು ಮಾಡುತ್ತೇವೆ. ತಾಲೂಕು, ಜಿಲ್ಲಾ ಪಂಚಾಯತ ಚುನಾವಣೆಯನ್ನ ಈ ಸರ್ಕಾರ ಬೇಗ ನಡೆಸಬೇಕು. ಸರ್ಕಾರಕ್ಕೆ ಸೋಲಿನ ಭಯವಿದೆ, ಇದೇ ಕಾರಣಕ್ಕೆ ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ ನಡೆಸಲು ಸಿದ್ದರಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಮುಖ್ಯಮಂತ್ರಿ ಕ್ಷೇತ್ರದಲ್ಲಿ ಬರುವ ಬಂಕಾಪೂರ ಪುರಸಭೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಕಾಂಗ್ರೆಸ್ ಪಕ್ಷ ಸಂಘಟನೆ ಮತ್ತು ಹೋರಾಟಕ್ಕೆ ಹೆಚ್ಚು ಒತ್ತು ಕೊಡುತ್ತೇವೆ. ಮುಂದಿನ ತಿಂಗಳು ಮಹದಾಯಿಗಾಗಿ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ. ಸಿ.ಟಿ.ರವಿ ನೆಹರು ಬಗ್ಗೆಯೂ ಟೀಕೆ ಮಾಡ್ತಾರೆ, ಅವರಿಗೆ ಸ್ವತಂತ್ರ ಹೋರಾಟ ಏನೂ ಅನ್ನೋದೆ ಗೊತ್ತಿಲ್ಲ. ಮೇಕೆದಾಟು ಯೋಜನೆ ಬಗ್ಗೆ ಹೋರಾಟ ಮಾಡಿದರೆ, ಮೇಕೆ ತಿನ್ನುವುದಕ್ಕೆ ಹೋಲಿಸುತ್ತಾರೆ, ಇದೊಂದು ಬಾಲಿಶ ಹೇಳಿಕೆ ಎಂದರು.
ಮುಂಬರುವ ವಿಧಾನಸಭೆಯ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ನಮ್ಮ ಪಕ್ಷದ ಹಿರಿಯರು ಈಗಾಗಲೇ ಎಲ್ಲಾ ಕ್ಷೇತ್ರದಲ್ಲಿ ಸರ್ವೆ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯ ಮುಂಚಿತವಾಗಿಯೇ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. 150 ಕ್ಷೇತ್ರದಲ್ಲಿ ನಾವು ಜಯಗಳಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.