Thursday, April 25, 2024

ಭಾಷಾಜ್ಞಾನ ಇದೆ‌ ಅಂತ ಎಲ್ಲಾ ಕಡೆ ಬಳಕೆ ಸಲ್ಲದು : ಸಚಿವ ಸಿ ಸಿ ಪಾಟೀಲ್​

ಗದಗ : ಗುತ್ತಿಗೆದಾರರು 40 ಪರ್ಸೆಂಟೆಜ್ ಕುರಿತಾದ ನೀಡಿರುವ ದೂರಿನ ಹಿಂದೆ‌ ಕಾಂಗ್ರೆಸ್ ಕೈವಾಡವಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್​ ಅವರು ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದಾರೆ.‌

ಗದಗ ಬೆಟಗೇರಿ ನಗರಸಭೆ ಚುನಾವಣೆ ವಿಚಾರದ ಹಿನ್ನೆಲೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ದೂರನ್ನ ಯಾರೋ ಬರೆದುಕೊಟ್ಟಿದ್ದು, ಗುತ್ತಿಗೆದಾರರ ಅಧ್ಯಕ್ಷರು ದೂರಿನ ಪ್ರತಿಯನ್ನ ನನ್ನ ಬಳಿ ತಂದಿದ್ದರು. ಅವರನ್ನ ಕೂರಿಸಿಕೊಂಡು ಓದಿದೆ. ಓದಿದಾಗ ಕೆಲ ಆಕ್ಷೇಪಾರ್ಹ, ಅಸಂವಿಧಾನಿಕ ಪದಗಳಿದ್ದವು, ಇದರ ಪ್ರತಿಯಾಗಿ ಗೌರವಾನ್ವಿತ ಪದ ಬಳಕೆಯಾಗಬೇಕು ಅಂತ ಅವರಿಗೆ ಹೇಳಲು ಹೋದಾಗ, ಆಗ ಅವರು ನನಗೇನು ಗೊತ್ತು? ಯಾರೋ ಬರೆದುಕೊಂಡು ಬಂದಿದ್ದರು. ಸರ್, ನಾನು ಸೈನ್ ಮಾಡಿದ್ದೇನೆ ಅಷ್ಟೇ ಎಂದರು. ಇದು ಅಕ್ಷರಶಃ ಸತ್ಯ, ಇದರ ಹಿಂದೆ ಕಾಂಗ್ರೆಸ್ ಕೈವಾಡವಂತೂ ಇದೆ ಎಂದು ಸರ್ಕಾರದ ವಿರುದ್ಧ ಭುಗಿಲೆದ್ದಿರೋ ನಲವತ್ತು ಪರ್ಸೆಂಟಜ್​ನ ಆರೋಪವನ್ನ ಕಾಂಗ್ರೆಸ್ ಕಡೆ ತಿರುಗಿಸಿದ್ದರು.

ಇದೇ ವೇಳೆ ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಭಾಷಾಜ್ಞಾನ ಇದೆ‌ ಅಂತ ಎಲ್ಲಾ ಕಡೆ ಬಳಕೆ ಸಲ್ಲದು. ಅವರ ಬಗ್ಗೆ ಎಲ್ಲರಿಗೂ ಗೌರವ ಇದೆ. ಭಾಷಾಜ್ಞಾನ ಇದೆ ಅನ್ನೋ ಕಾರಣಕ್ಕೆ ಎಲ್ಲೆಡೆ ಬಳಸಬಾರದು. ಅವರು ಒಬ್ಬ ಹಿರಿಯ ಶಾಸಕ, ಅಧ್ಯಕ್ಷರಾಗಿ ಕೆಲಸ ಮಾಡಿದವರು ಮಾತಿನ ಬರದಲ್ಲಿ ಹಿಡಿತ ತಪ್ಪಿ ಮಾತನಾಡುತ್ತಾರೆ. ಅವರ ಮಾತನ್ನ ನಾನಿನ್ನು ಕೇಳಿಲ್ಲ ಎಂದು‌ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದರು.

RELATED ARTICLES

Related Articles

TRENDING ARTICLES