Monday, February 24, 2025

ಅಕ್ರಮವಾಗಿ ಸಾಗಾಟವಾಗುತ್ತಿದ್ದ 500 ಕ್ವಿಂಟಲ್ ಪಡಿತರ ಅಕ್ಕಿ ವಶಕ್ಕೆ

ಕಾರವಾರ : ಹಾವೇರಿ ಜಿಲ್ಲೆಯ ಅಕ್ಕಿಆಲೂರು ಕಡೆಯಿಂದ ಮಂಗಳೂರು ಕಡೆಗೆ ಎರಡು ಕಂಟೇನರ್ ಲಾರಿಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಸುಮಾರು 500 ಕ್ವಿಂಟಲ್ ಪಡಿತರ ಅಕ್ಕಿಯನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸರು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ.

ಹೊನ್ನಾವರ ತಾಲೂಕಿನ ಆರೊಳ್ಳಿಯ ರಾಷ್ಟ್ರೀಯ ಹೆದ್ದಾರಿ 69ರಲ್ಲಿ 500 ಕ್ವಿಂಟಲ್ ಅಕ್ಕಿ, ವಾಹನ ಸೇರಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದು ಅನ್ನಭಾಗ್ಯ ಪಡಿತರ ಅಕ್ಕಿ ಎನ್ನುವ ಅನುಮಾನ ಹುಟ್ಟುಹಾಕಿದೆ. 500 ಕ್ವಿಂಟಲ್ ಅಕ್ಕಿ ತುಂಬಿದ 2 ಲಾರಿಯನ್ನು ಹೊನ್ನಾವರ ತಾಲೂಕು ತಹಶಿಲ್ದಾರ ಹಾಗೂ ಆಹಾರ ನಿರೀಕ್ಷಕರು ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.

ವಶಪಡಿಸಿಕೊಂಡ ಅಕ್ಕಿಯನ್ನ ಕರ್ಕಿಯಲ್ಲಿರುವ ದಾಸ್ತಾನು ಮಳಿಗೆಯಲ್ಲಿ ಸಂಗ್ರಹ ಮಾಡಲಾಗಿದೆ, ಇನ್ನು ಅಕ್ರಮ ಅಕ್ಕಿ ಸಾಗಾಣಿಕೆಯ ದೊಡ್ಡ ಜಾಲ ಹರಡಿದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಹೊನ್ನಾವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರಿಗೂ ಕಾಣದ ರೀತಿಯಲ್ಲಿ ದೊಡ್ಡ ಕಂಟೇನರ್ ವಾಹನದಲ್ಲಿ ಸಾಗಿಸುತ್ತಿರುವುದನ್ನು ನೋಡಿದರೆ ಇದು ಅನ್ನ ಭಾಗ್ಯದ ಅಕ್ಕಿಯೇ ಎನ್ನುವ ಶಂಕೆ ವ್ಯಕ್ತವಾಗಿದೆ. ದಾಳಿಯಲ್ಲಿ ಹೊನ್ನಾವರ ಸಿಪಿಐ ಶ್ರೀಧರ ಎಸ್.ಆರ್., ಪಿಎಸ್‍ಐ ಶಶಿಕುಮಾರ್, ನಿರಂಜನ್, ತಹಶೀಲ್ದಾರ್ ನಾಗರಾಜ ನಾಯ್ಕಡ್, ಆಹಾರ ನಿರೀಕ್ಷಕ ವೆಂಕಟ್ರಮಣ, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

RELATED ARTICLES

Related Articles

TRENDING ARTICLES