Saturday, April 27, 2024

ಗ್ರೌಂಡ್​ ರಿಪೋರ್ಟ್ : ‘ಅನಂತ’ರ ತರುವಾಯ ‘ದಕ್ಷಿಣ’ಪಥೇಶ್ವರ ಯಾರು?

ಗ್ರೌಂಡ್​ ರಿಪೋರ್ಟ್14 : ಬೆಂಗಳೂರು ದಕ್ಷಿಣ
ಬೆಂಗಳೂರು : ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿರುವ ರಣಕಣ. ಅನಂತ್​​ ಕುಮಾರ್ ಅವರ ನಿಧನದಿಂದ ತೆರವಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಕಲಿಯಾಗಿ ಯುವ ನಾಯಕ, 28ರ ತರುಣ ತೇಜಸ್ವಿ ಸೂರ್ಯ ಕಣಕ್ಕಿಳಿದಿದ್ದಾರೆ. ‘ಅನಂತ’ ಯಶಸ್ಸು ಕಂಡ ಈ ಕ್ಷೇತ್ರದಲ್ಲಿ ಧಿಗ್ಗನೆದ್ದ ‘ಸೂರ್ಯ’ಗೆ ಅನಂತ್​ ಕುಮಾರ್ ಅವರ ಪತ್ನಿ ‘ತೇಜಸ್ವಿನಿ’ ಅವರ ಮುನಿಸು ಮುಳುವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಅನಂತ್​ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್​ ಕುಮಾರ್ ಅವರ ಹೆಸರನ್ನೇ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್​ಗೆ ಕಳುಹಿಸಿ ಕೊಟ್ಟಿದ್ದರು. ಆದರೆ. ಅಂತಿಮ ಕ್ಷಣದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್​ ನೀಡಲಾಗಿದೆ.
ಇನ್ನು ಈ ಕ್ಷೇತ್ರದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕಣಕ್ಕಿಳಿಯುತ್ತಾರೆ ಎಂದೂ ಸಹ ಹೇಳಲಾಗಿತ್ತು. ಹೀಗೆ ನಾನಾ ಕಾರಣದಿಂದ ಸಖತ್ ಸೌಂಡ್ ಮಾಡ್ತಿರೋ ಕ್ಷೇತ್ರ ಬೆಂಗಳೂರು ದಕ್ಷಿಣ. ಬಿಜೆಪಿಯ ತೇಜಸ್ವಿ ಕುಮಾರ್ ಅವರಿಗೆ ಪ್ರಬಲ ಎದುರಾಳಿ ಕಾಂಗ್ರೆಸ್​ನ ಬಿ.ಕೆ ಹರಿಪ್ರಸಾದ್​.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿ ಮತ್ತು 3ರಲ್ಲಿ ಕಾಂಗ್ರೆಸ್​ ಶಾಸಕರಿದ್ದಾರೆ.
ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು

ಗೋವಿಂದರಾಜನಗರ – ಬಿಜೆಪಿ – ವಿ.ಸೋಮಣ್ಣ

ವಿಜಯನಗರ – ಕಾಂಗ್ರೆಸ್​ – ಎಂ ಕೃಷ್ಣಪ್ಪ

ಚಿಕ್ಕಪೇಟೆ -ಬಿಜೆಪಿ – ಉದಯ್​​ ಗರುಡಾಚಾರ್​​

ಬಸವನಗುಡಿ – ಬಿಜೆಪಿ – ಎಲ್​​.ಎ ರವಿಸುಬ್ರಮಣ್ಯ

ಪದ್ಮನಾಭನಗರ  – ಬಿಜೆಪಿ – ಆರ್​.ಅಶೋಕ್​

ಬಿಟಿಎಂ ಲೇಔಟ್​ – ಕಾಂಗ್ರೆಸ್​ – ರಾಮಲಿಂಗಾರೆಡ್ಡಿ

ಜಯನಗರ – ಕಾಂಗ್ರೆಸ್ -​ ಸೌಮ್ಯ ರೆಡ್ಡಿ

ಬೊಮ್ಮನ ಹಳ್ಳಿ – ಬಿಜೆಪಿ – ಸತೀಶ್ ರೆಡ್ಡಿ

ಇನ್ನು ಲೋಕಸಭಾ ಚುನಾವಣೆ ಇತಿಹಾಸವನ್ನು ನೋಡಿದರೆ ಇದುವರೆಗೆ 7 ಬಾರಿ ಬಿಜೆಪಿ, 6 ಬಾರಿ ಕಾಂಗ್ರೆಸ್, 3 ಬಾರಿ ಜನತಾ ಪಾರ್ಟಿ ಅಭ್ಯರ್ಥಿಗಳು ಈ ಕ್ಷೇತ್ರದಿಂದ ಸಂಸತ್​ ಪ್ರವೇಶಿಸಿದ್ದಾರೆ. 1991ರಿಂದ ಇಲ್ಲಿ ಬಿಜೆಪಿಯದ್ದೇ ಗೆಲುವು. ಅದರಲ್ಲೂ ದಿ. ಅನಂತ್​ ಕುಮಾರ್ ಅವರು 1996ರಿಂದ 2014ರವರೆಗೆ ಸತತ 6 ಬಾರಿ ಅನಂತ್​ ಕುಮಾರ್​ ಅವರೇ ಗೆಲುವು ಸಾಧಿಸಿದ್ದರು.
1952 : ಟಿ. ಮಾದೇಗೌಡ , ಕಾಂಗ್ರೆಸ್
1957,1962 : ಹೆಚ್.ಸಿ ದಾಸಪ್ಪ, ಕಾಂಗ್ರೆಸ್
1967, 1971 : ಕೆ. ಹನುಮಂತಯ್ಯ, ಕಾಂಗ್ರೆಸ್
1977 : ಕೆ.ಎಸ್​ ಹೆಗ್ಡೆ , ಜನತಾ ಪಾರ್ಟಿ
1980 : ಟಿ.ಆರ್ ಶಾಮಯ್ಯ, ಜನತಾ ಪಾರ್ಟಿ
1984 : ವಿ.ಎಸ್​ ಕೃಷ್ಣ ಅಯ್ಯರ್, ಜನತಾ ಪಾರ್ಟಿ
1989 : ಆರ್. ಗುಂಡೂರಾವ್, ಕಾಂಗ್ರೆಸ್
1991 : ಕೆ.ವಿ ಗೌಡ, ಬಿಜೆಪಿ
1996, 1998, 1999, 2004, 2009, 2014 : ಅನಂತ್​ ಕುಮಾರ್, ಬಿಜೆಪಿ
=
2014ರ ಚುನಾವಣೆ
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಅನಂತ್ ಕುಮಾರ್ ಅವರು ಕಾಂಗ್ರೆಸ್​ನ ನಂದನ್​ ನಿಲೇಕಣಿ 2,28,575 ಮತಗಳ ಅಂತರದ ಗೆಲುವು ಪಡೆದಿದ್ದರು. ಅನಂತ್​ ಕುಮಾರ್​ ಅವರು 6,33,816 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್​​ನ ನಂದನ್​ ನಿಲೇಕಣಿ ಅವರಿಗೆ 4,05,241 ಮತಗಳು ಬಂದಿದ್ದವು.

‘ಮತ’ಗಣಿತ 

ಪುರುಷರು 11,29,388

ಮಹಿಳೆಯರು 10,36,718

ತೃತೀಯ ಲಿಂಗಿಗಳು 339

ಒಟ್ಟು 21,66,445

‘ಜಾತಿ’ ಗಣಿತ

ಹಿಂದೂಗಳು 14,00,000

ಮುಸ್ಲಿಮರು 6,50,000

ಕ್ರೈಸ್ತರು 83,000

ಇತರೆ 12,000

ಅಭ್ಯರ್ಥಿಗಳ ಬಲಾಬಲ

ಬಿ.ಕೆ ಹರಿಪ್ರಸಾದ್​ ಅವರಿಗೆ ಪೂರಕ ಅಂಶಗಳೇನು?
ಮೈತ್ರಿಕೂಟದ ಅಭ್ಯರ್ಥಿಯಾಗಿರುವುದರಿಂದ ಜೆಡಿಎಸ್​ ಮತ ಕೂಡ ಕಾಂಗ್ರೆಸ್​​ಗೆ​ ಸಿಗಬಹುದು
ಮೊದಲ ಬಾರಿಗೆ ಕ್ಷೇತ್ರದಲ್ಲಿ ಕೈ ಶಾಸಕರು ಸಾಂಘಿಕ ಹೋರಾಟದ ಉತ್ಸಾಹ ತೋರುತ್ತಿರುವುದು
ಒಡೆದ ಮನೆಯಂತಿದ್ದ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವುದು
ಕ್ಷೇತ್ರ ವ್ಯಾಪ್ತಿಯ ಪ್ರಭಾವಿ ಶಾಸಕರು, ಮುಖಂಡರು ಪರಸ್ಪರ ಕೈಮಿಲಾಯಿಸಲು ಮನಸ್ಸು ಮಾಡಿರುವುದು

ಬಿ.ಕೆ ಹರಿಪ್ರಸಾದ್​ ಅವರಿಗೆ ಆತಂಕಗಳೇನು?
20 ವರ್ಷಗಳ ನಂತರ ಕ್ಷೇತ್ರದ ಕಡೆ ಮುಖ ಮಾಡಿರುವುದು
ದಿವಂಗತ ಅನಂತ್​ಕುಮಾರ್ ಅವರ ಪ್ರಭಾವ ಕ್ಷೇತ್ರದಲ್ಲಿರುವುದು
1991ರಿಂದಲೂ ಬೆಂಗಳೂರು ದಕ್ಷಿಣ ಬಿಜೆಪಿಯ ಭದ್ರಕೋಟೆ

ತೇಜಸ್ವಿ ಸೂರ್ಯ ಅವರಿಗೆ ಪೂರಕ ಅಂಶಗಳು
28 ವರ್ಷಗಳಿಂದಲೂ ಈ ಕ್ಷೇತ್ರ ಕಮಲದ ತೆಕ್ಕೆಯಲ್ಲಿರುವುದು
ದಿವಂಗತ ಅನಂತ್​ ಕುಮಾರ್​ ಅವರ ಪ್ರಭಾವ ಒಂಚೂರೂ ಕಡಿಮೆಯಾಗಿಲ್ಲ
ಕ್ಷೇತ್ರದಲ್ಲಿ ಹೆಚ್ಚು ಪ್ರಭಾವಿ ಶಾಸಕರು ಇರುವುದು
ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿರುವುದು
ಕ್ಷೇತ್ರದಲ್ಲಿ ಅಮಿತ್ ಶಾ ರೋಡ್ ಶೋ ನಡೆಸಿದ್ದರಿಂದ ಬಿಜೆಪಿಗೆ ಮತ್ತಷ್ಟು ಆನೆಬಲ
ಮೋದಿಯ ಅಲೆ ಹಾಗೂ ಪ್ರಬಲ ಸಂಘಟನೆಯಿದೆ

ತೇಜಸ್ವಿ ಸೂರ್ಯ ಅವರಿಗೆ ಆತಂಕಗಳೇನು?
ತೇಜಸ್ವಿ ಸೂರ್ಯರನ್ನು ಮುಕ್ತವಾಗಿ ಸ್ವೀಕರಿಸಲು ಕೆಲ ಹಿರಿಯ ಶಾಸಕರಿಗೆ ಮನಸ್ಸಿಲ್ಲ
ನಾಮಪತ್ರ ಸಲ್ಲಿಕೆ ವೇಳೆ ಹಿರಿಯ ಮುಖಂಡರು ಗೈರಾಗಿದ್ದರು
ರಾಜಕೀಯ ಅನುಭವ ಸ್ವಲ್ಪವೂ ಇಲ್ಲದಿರುವುದು

ಪ್ರಭಾವ ಬೀರುವ ಅಂಶಗಳು
ಬಿಟಿಎಂ ಲೇಔಟ್​​, ಜಯನಗರ, ವಿಜಯನಗರ, ಬಸವನಗುಡಿ ಮುಂತಾದ ಕ್ಷೇತ್ರಗಳಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚು
ಜಯನಗರದಲ್ಲಿ ಸುಸಜ್ಜಿತ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣವಾಗಿ 4 ವರ್ಷ ಕಳೆದ್ರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ
ಕಾಣದ ಕೈಗಳು ಇಲ್ಲಿನ ವ್ಯಾಪಾರಿಗಳಿಗೆ ಮಳಿಗೆ ಸಿಗದಂತೆ ತಡೆದಿವೆ
ಚಿಕ್ಕಪೇಟೆ ಹೆಸರಿಗೆ ತಕ್ಕಂತೆ ಚಿಕ್ಕ ರಸ್ತೆಗಳನ್ನು ಹೊಂದಿರುವುದರಿಂದ ಸಂಚಾರ ದಟ್ಟಣೆ
ಚಿಕ್ಕಪೇಟೆಯಲ್ಲಿ ಪಾರ್ಕಿಂಗ್ ಸಮಸ್ಯೆ ತೀವ್ರವಾಗಿದೆ

ಸಂಸದರು ಮಾಡಿದ್ದೇನು? (ಅನುದಾನ ಬಳಕೆ) (ದಿ.ಅನಂತ್​ಕುಮಾರ್ ಅವರು)
ಅನಂತ್​ ​ಕುಮಾರ್​​ ಇಂದು ನಮ್ಮ ಜೊತೆ ಇಲ್ಲದಿದ್ದರೂ ಇವರ ಸಾಧನೆ ಅಪಾರ
ಬೆಂಗಳೂರಿಗೆ ‘ನಮ್ಮ ಮೆಟ್ರೋ’ ತರುವುದರಲ್ಲಿ ಅನಂತ ಕುಮಾರ್ ಬಹಳ ಶ್ರಮಪಟ್ಟಿದ್ದರು
ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಮನೆ ಮತ್ತು ಶೌಚಾಲಯ ನಿರ್ಮಾಣ
ಕ್ಷೇತ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿದ್ದರು
ಅದಮ್ಯ ಚೇತನದ ಮೂಲಕ 50ಕ್ಕೂ ಹೆಚ್ಚು ಉಚಿತ ನೇತ್ರ ಚಿಕಿತ್ಸಾ ಶಿಬಿರ
ಸಾವಿರಾರು ಜನರಿಗೆ ಕಣ್ಣಿನ ಶತ್ರಚಿಕಿತ್ಸೆ ಉಚಿತವಾಗಿ ಮಾಡಿಸಿದ್ದಾರೆ

ಕ್ಷೇತ್ರ ಪರಿಚಯ
ಸಸ್ಯಕಾಶಿ ಲಾಲ್​​ಬಾಗ್​, ಬಸವನಗುಡಿಯ ದೊಡ್ಡ ಬಸವನ ದೇಗುಲ
ದೊಡ್ಡ ಗಣೇಶನ ದೇವಾಲಯ ಬಹಳ ಪ್ರಸಿದ್ಧ
ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ರಾಮಕೃಷ್ಣ ಆಶ್ರಮ
ಹಳೆ ಬೆಂಗಳೂರಿನ ಅತ್ಯಂತ ಪ್ರಸಿದ್ಧ ಶಾಪಿಂಗ್ ವಲಯ ಚಿಕ್ಕಪೇಟೆ

RELATED ARTICLES

Related Articles

TRENDING ARTICLES