Friday, April 19, 2024

ಸಂಸದ ನಳಿನ್​ ಕುಮಾರ್ ಬದಲಾವಣೆಗೆ ಒತ್ತಡ – ಅಮಿತ್ ಶಾ ಆಗಮನದ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನರಾಗ..!

ಮಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಲೋಕಸಭಾ ಟಿಕೆಟ್​ ಹಂಚಿಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಭಿನ್ನರಾಗ ಶುರುವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಾಲಿ ಸಂಸದ ನಳಿನ್​ ಕುಮಾರ್ ಕಟೀಲ್ ಅವರ ಬದಲಾವಣೆಗೆ ಕೆಲ ಹಿಂದೂ ಸಂಘಟನೆಗಳ. ಬಿಜೆಪಿ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಕರಾವಳಿಯ ಪ್ರಬಲ ಬಿಲ್ಲವ ಸಮುದಾಯಕ್ಕೆ ಸೇರಿದ ಸತ್ಯಜಿತ್ ಸುರತ್ಕಲ್ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಿಂದೂಪರ ಸಂಘಟನೆಗಳ ಕೆಲವು ಕಾರ್ಯಕರ್ತರು ಸತ್ಯಜಿತ್ ಅವರಿಗೆ ಬೆಂಬಲ ನೀಡಿ ‘ಮತ್ತೊಮ್ಮೆ ಮೋದಿಗಾಗಿ ನಮ್ಮ ಆಯ್ಕೆ ಸತ್ಯಜಿತ್ ಸುರತ್ಕಲ್’ ಅಂತ ಫ್ಲೆಕ್ಸ್ ಹಾಕಿದ್ದಾರೆ. ಬೆಳ್ತಂಗಡಿ, ಮಂಗಳೂರು, ಬಂಟ್ವಾಳ, ಪುತ್ತೂರು ಮತ್ತು ಸುಳ್ಯದಲ್ಲಿ ಫ್ಲೆಕ್ಸ್ ಅಳವಡಿಸಲಾಗಿದೆ.
ನಳಿನ್​ ಕುಮಾರ್ ಕಟೀಲ್ ಅವರು ಕಳೆದ 5 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನಹರಿಸಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಜೊತೆಗೆ ಸತ್ಯಜಿತ್ ಸೂರತ್ಕಲ್ ಅವರು ಬಿಲ್ಲವ ಸಮುದಾಯದ ಪ್ರಬಲ ನಾಯಕರಾಗಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ರು. ಈ ಬಾರಿ ಟಿಕೆಟ್​ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬೆಂಬಲಿಗರ ಒತ್ತಾಯಕ್ಕೆ ಮಣಿದು ಬಿಜೆಪಿ ನಳಿನ್ ಕುಮಾರ್​ ಬದಲಿಗೆ ಸತ್ಯಜಿತ್ ಅವರಿಗೇ ಟಿಕೆಟ್ ನೀಡೋ ಸಾಧ್ಯತೆ ಹೆಚ್ಚಾಗಿದೆ.
ಈ ಮೂಲಕ ನಳಿನ್​ ಕುಮಾರ್ ಕಟೀಲ್ ಅವರ ಬದಾಲವಣೆಗೆ ಒತ್ತಡ ತಂದು ಸತ್ಯಜಿತ್​ ಸುರತ್ಕಲ್ ಅವರನ್ನು ಕಣಕ್ಕಿಳಿಸೋ ಯೋಚನೆ ಪಕ್ಷದ ಕೆಲವು ಕಾರ್ಯಕರ್ತರದ್ದಾಗಿದೆ.

RELATED ARTICLES

Related Articles

TRENDING ARTICLES