Saturday, April 20, 2024

ಆಡಿಯೋ ವಾರ್​ನಲ್ಲೇ ಅಂತ್ಯವಾಯ್ತು ಕಲಾಪ

ಬೆಂಗಳೂರು: ಇಂದಿನ ವಿಧಾನಸಭಾ ಕಲಾಪ ಆಡಿಯೋ ವಾರ್​ನಲ್ಲೇ ಮುಗಿಯಿತು. ಕಲಾಪದ ಆರಂಭದಲ್ಲಿ ಮಾತನಾಡಿದ ಸಭಾಪತಿ ರಮೇಶ್​ ಕುಮಾರ್​ ಸಿಎಂ ಕುಮಾರಸ್ವಾಮಿ ರಿಲೀಸ್​ ಮಾಡಿದ ಆಡಿಯೋ ಕುರಿತು ಪ್ರಸ್ತಾಪಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಗುರುಮಿಠ್ಕಲ್​ ಜೆಡಿಎಸ್​ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ನಡುವೆ ನಡೆದಿದೆ ಎನ್ನಲಾಗಿರುವ ಅಡಿಯೋ ಕ್ಲಿಪ್​ ಒಂದನ್ನು ಸಿಎಂ ಬಜೆಟ್​ ದಿನ ರಿಲೀಸ್ ಮಾಡಿದ್ದರು. ಈ ಆಡಿಯೋದಲ್ಲಿ ಸ್ಪೀಕರ್​ ರಮೇಶ್ ಕುಮಾರ್ ಹಾಗೂ ಪ್ರಧಾನಿಯವರ ಹೆಸರೂ ಕೇಳಿಬಂದಿತ್ತು. ಈ ಕುರಿತು ಬೇಸರ ವ್ಯಕ್ತಪಡಿಸಿದ ಸ್ಪೀಕರ್​ ಅವರು ‘ಚಾರಿತ್ರ್ಯ ವಧೆ ಸಾವಿಗಿಂತ ಕ್ರೂರ’ ಎಂದು ಆಡಿಯೋದಲ್ಲಿ ತನ್ನ ಹೆಸರು ಕೇಳಿ ಬಂದಿರುವ ಬಗ್ಗೆ ಭಾವುಕರಾದರು. ಬಳಿಕ ಈ ಆಡಿಯೋ ಕ್ಲಿಪ್​ ಬಗ್ಗೆ ಸಮಗ್ರ ತನಿಖೆ ನಡೆಸಬೇಕು” ಎಂದು ಸಿಎಂ ಅವರಿಗೆ ಸಲಹೆ ನೀಡಿದ್ರು. 

ಸ್ಪೀಕರ್ ಅವರ ಸೂಚನೆಗೆ ಒಪ್ಪಿಗೆ ಸೂಚಿಸಿದ ಸಿಎಂ ಆಡಿಯೋ ಪ್ರಕರಣವನ್ನು ಎಸ್​ಐಟಿಗೆ ತನಿಖೆಗೆ ವಹಿಸುವುದಾಗಿ ಹೇಳಿದರು. ಎಸ್​ಐಟಿ ತನಿಖೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತು. ಚಿಕ್ಕನಾಯಕನ ಹಳ್ಳಿ ಶಾಸಕ ಮಾಧುಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು ಎಸ್​ಐಟಿ ತನಿಖೆಯಲ್ಲಿ ತಮಗೆ ನಂಬಿಕೆ ಇಲ್ಲ. ನಿಮ್ಮ ನೇತೃತ್ವದಲ್ಲೇ ತನಿಖೆಯಾಗಲಿ ಎಂದು ಸ್ಪೀಕರ್​ ರಮೇಶ್ ಕುಮಾರ್ ಅವರಲ್ಲಿ ಮನವಿ ಮಾಡಿದರು. ಆದರೆ ರಮೇಶ್​ ಕುಮಾರ್​ ಅವರು ಈ ಆಡಿಯೋ ವಿಚಾರದಲ್ಲಿ ತನ್ನ ಹೆಸರೂ ಕೂಡ ಪ್ರಸ್ತಾಪವಾಗಿದೆ. ನಾನು ಈ ವಿಚಾರವನ್ನು ತನಿಖೆ ಮಾಡಲು ಆಗಲ್ಲ. ನಾನು ಸರ್ಕಾರಕ್ಕೆ ಸಲಹೆಯನ್ನು ನೀಡಬಹುದಷ್ಟೇ ಎಂದರು. 15 ದಿನದೊಳಗೆ ಈ ವಿಚಾರದ ಬಗ್ಗೆ ತನಿಖೆಯಿಂದ ಸ್ಪಷ್ಟನೆ ಸಿಗಬೇಕು ಎಂದರು. ಎಸ್​ಐಟಿ ತನಿಖೆಗೆ ಒಪ್ಪಿಸುವುದಾಗಿ ಸಿಎಂ ಘೋಷಿಸಿದ್ರು.

ಬಿಜೆಪಿ ಮಾತ್ರ ಪಟ್ಟು ಸಡಿಲಿಸದೆ ಎಸ್​ಐಟಿ ತನಿಖೆಗೆ ವಿರೋಧ ವ್ಯಕ್ತಪಡಿಸಿತು. ಹೀಗೆ ‘ಆಡಿಯೋ ವಾರ್’​ನಲ್ಲೇ  ಕಲಾಪ ಅಂತ್ಯವಾಯಿತು. ಕೊನೆಯಲ್ಲಿ ಸಿಡಿಯೊಂದನ್ನು ಪ್ರದರ್ಶಿಸಿದ ಶಾಸಕ ರೇಣುಕಾಚಾರ್ಯ, ‘ಇದು 40 ಕೋಟಿ ಸಿಡಿ’ ಎಂದು ಹೇಳಿ ಸ್ಪೀಕರ್​ಗೆ ಸಿಡಿ ನೀಡಿ ಈ ಬಗ್ಗೆಯೂ ತನಿಖೆಯಾಗಲಿ ಎಂದು ಒತ್ತಾಯಿಸಿದ್ರು. ನಂತರ ಸ್ಪೀಕರ್​ ನಾಳೆ ಬೆಳಗ್ಗೆ 11ಗಂಟೆಗೆ ಕಲಾಪ ಮುಂದೂಡಿದರು.

RELATED ARTICLES

Related Articles

TRENDING ARTICLES