ನಿರ್ಮಾಪಕ ಸಾ.ರಾ ಗೋವಿಂದ್ ಅವರ ಪುತ್ರ ಅನೂಪ್ ಮೇಲೆ ಗೂಂಡಾಗಿರಿ ಆರೋಪ ಕೇಳಿಬಂದಿದೆ. ಅನೂಪ್ ಅವರು ಕ್ಯಾಬ್ ಚಾಲಕ ಹರೀಶ್ ಅನ್ನೋರ ಮೇಲೆ ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ ಅಂತ ಹೇಳಲಾಗುತ್ತಿದೆ. ಅನೂಪ್ ಹರೀಶ್ ಅವರನ್ನು ಕಿಡ್ನಾಪ್ ಮಾಡಿಸಿ ತನ್ನ ಗೆಳೆಯರಾದ ಪ್ರಭಾಕರ್ ಮತ್ತು ಸತ್ಯ ಅವರಿಂದ ಹಲ್ಲೆ ಮಾಡಿಸಿದ್ದಾರೆ ಎನ್ನಲಾಗಿದೆ. ಅನೂಪ್ ಅವರ ಫ್ರೆಂಡ್ಸ್ ಹರೀಶ್ ಅವರನ್ನು ಬಸವೇಶ್ವರ ನಗರದ ಪವಿತ್ರ ಪ್ಯಾರಡೈಸ್ ನಿಂದ ಕಿಡ್ನಾಪ್ ಮಾಡಿಸಿ, ಸದಾಶಿವನಗರದ ಬಳಿ ಕಾರಿನಲ್ಲೇ ಕೂರಿಸಿಕೊಂಡು ಥಳಿಸಿದ್ದಾರಂತೆ. ಈ ಬಗ್ಗೆ ಸದಾಶಿವ ನಗರ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.
ಸಾ,ರಾ ಗೋವಿಂದ್ ಪ್ರತಿಕ್ರಿಯೆ : ತಮ್ಮ ಮಗನ ಬಗ್ಗೆ ಕೇಳಿ ಬಂದಿರೋ ಆರೋಪಕ್ಕೆ ಸಂಬಂಧಿಸಿದಂತೆ ಪವರ್ ಟಿವಿಗೆ ಪ್ರತಿಕ್ರಿಯೆ ನೀಡಿದ ಸಾ.ರಾ ಗೋವಿಂದ್, ”ಕಾಲ ಬದಲಾಗಿದೆ. ಮನಸ್ಸಿಗೆ ತುಂಬಾ ನೋವಾಗಿದೆ, ನನ್ನ ಮಗ ಕೆಲಸಗಾರರನ್ನು ತಲೆ ಮೇಲೆ ಕೂರಿಸಿಕೊಂಡ. ಡ್ರೈವರ್ ಅನ್ನು ನಡೆಸಿಕೊಳ್ಳುವಂತೆ ನಡೆಸಿಕೊಳ್ಳಲಿಲ್ಲ. ಅವನಿಗೇ ಒಂದು ಕಾರು ಕೊಡಿಸಿದ್ದಾನೆ, ಮನೆಗೆ ಟಿವಿ ತಂದುಕೊಟ್ಟಿದ್ದಾನೆ. ಅವನ ಮದ್ವೆಗೆ ದುಡ್ಡು ಕೊಟ್ಟಿದ್ದಾನೆ. ಇಷ್ಟೆಲ್ಲಾ ಮಾಡಿದ್ದು ಅವನು (ಹರೀಶ್) ಚೆನ್ನಾಗಿರ್ಲಿ ಅಂತ. ಇಷ್ಟೆಲ್ಲಾ ಕೊಟ್ಟ ಮೇಲೆ ಸರಿಯಾಗಿ ಕೆಲಸಕ್ಕೆ ಬರಬೇಕಲ್ವಾ..? ಕೆಲಸಕ್ಕೆ ಬರಲ್ಲ ಬೇರೆಕಡೆ ಹೋಗ್ತೀನಿ ಅಂದಾಗ, ಸರಿ ಹೋಗು ನನ್ನ ಕಾರು ಕೊಡಿಸಿದ್ದೆಲ್ಲಾ ವಾಪಸ್ಸು ಕೊಡು ಅಂತ ನನ್ನ ಮಗ ಕೇಳಿದ್ದಾನೆ. ಕಾರು ನಂದು ಅಂದಾಗ, ಅನೂಪ್ ಪಕ್ಕದಲ್ಲಿ ಇದ್ದವರು ಸುಳ್ಳು ಹೇಳ್ತೀಯಾ ಅಂತ ಒಂದು ಪೆಟ್ಟು ಹೊಡೆದಿರಬಹುದು. ಆಗ ಅನೂಪನೇ ತಪ್ಪಿಸಿದ್ದಾನೆ. ಇದನ್ನು ದೊಡ್ಡದು ಮಾಡೋದು ಸರಿಯಲ್ಲ. ಇದರಿಂದ ತುಂಬಾನೇ ಬೇಜಾರಾಗುತ್ತಿದೆ” ಅಂತ ಹೇಳಿದ್ದಾರೆ.