Friday, April 26, 2024

ವಿಧಿವಶರಾದ ರಾಜವಂಶಸ್ಥೆ ಅದೆಂಥಾ ಪ್ರಾಣಿ ಪ್ರಿಯೆ ಆಗಿದ್ರು ಗೊತ್ತಾ..?

ಇಡೀ ದೇಶವೇ ದಸರಾ ಸಂಭ್ರಮಾಚಾರಣೆಯಲ್ಲಿ ಮುಳುಗಿತ್ತು. ದಸರಾ ಅಂದ್ರೆ ಕೇಳ್ಬೇಕೆ ಮೈಸೂರಲ್ಲಿ ಹಬ್ಬದ ಸಡಗರ, ರಾಜ-ಮಹಾರಾಜರ ಕಾಲದ ವೈಭವ  ಮನೆ ಮಾಡಿರುತ್ತೆ. ಆದ್ರೆ, ಈ ಬಾರಿ ಮೈಸೂರು ರಾಜವಂಶಕ್ಕೆ ವಿಜಯದಶಮಿಯಂದೇ ಸೂತಕ.

ಶುಕ್ರವಾರ ಬೆಳಗ್ಗೆ ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣ್ಣಿ ತೀರಿಕೊಂಡ್ರು. ಇವರ ಸಾವಿನ ದುಃಖದ ಬೆನ್ನಲ್ಲೇ ಮತ್ತೊಂದು ಸಾವಿನ ಸುದ್ದಿ ಮೈಸೂರು ರಾಜವಂಶಸ್ಥರನ್ನು ಕಾಡಿತು. ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ರಾಜವಂಶಸ್ಥೆ ವಿಶಾಲಾಕ್ಷಿ ದೇವಿ (56) ಸಂಜೆ ಹೊತ್ತಿಗೆ ಕೊನೆಯುಸಿರೆಳೆದ್ರು.

ಅಗಲಿದ ರಾಜವಂಶಸ್ಥೆ ವಿಶಾಲಾಕ್ಷಿ ದೇವಿಯವರ ಬಗ್ಗೆ ಎಷ್ಟೋ ವಿಷಯಗಳು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಇವರು ಜಯಚಾಮರಾಜೇಂದ್ರ ಒಡೆಯರ್-ತ್ರಿಪುರ ಸುಂದರಿ ಅಮ್ಮಣ್ಣಿ ದಂಪತಿಯ 6ನೇ ಮಗಳು. ಅಂದ್ರೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಮುದ್ದಿನ ತಂಗಿ. ಪತಿ ಗಜೇಂದ್ರ ಸಿಂಗ್, ಮಗ ರುದ್ರಪ್ರತಾಪ್ ಸಿಂಗ್, ಪುತ್ರಿ ಶ್ರುತಿ ಕುಮಾರಿ.

ವಿಶಾಲಾಕ್ಷಿ ದೇವಿ ಅವರಿಗೂ ಗಡಿ ಜಿಲ್ಲೆ ಚಾಮರಾಜನಗರ ಅರಣ್ಯಗಳಿಗೂ ಎಲ್ಲಿಲ್ಲದ ಸಂಬಂಧವಿತ್ತು ಅಂತ ನಿಮ್ಗೆ ಗೊತ್ತೇ? ಮೈಸೂರಿನ ರಾಜಮನೆತನದ ಗುಣ ಸಹಜವಾಗಿ ಇವರಿಗೂ ರಕ್ತಗತವಾಗಿ ಬಂದಿತ್ತು. ರಾಜಮನೆತನದ ಎಲ್ಲರಂತೆ ಇವರು ಕೂಡ ಪ್ರಾಣಿಪ್ರಿಯೆ.

ಚಾಮರಾಜನಗರ ಜಿಲ್ಲೆ  ಬಂಡೀಪುರ ಅರಣ್ಯ ಪ್ರದೇಶದಲ್ಲಿ 2001 ರ ಏಪ್ರಿಲ್ ನಲ್ಲಿ ಖೆಡ್ಡಾದಲ್ಲಿ ಬಿದ್ದಿದ್ದ ಒಂದೂವರೆ ತಿಂಗಳ 3 ಆನೆಮರಿಗಳನ್ನು ಪಡೆದು ಬಂಡೀಪುರ ಸಮೀಪದ ತಮ್ಮ ಜಮೀನಿನಲ್ಲಿ 9 ವರ್ಷಗಳ ಕಾಲ ಪೋಷಿಸಿದ್ದರು‌. ಮಕ್ಕಳಂತೆ ಬಾಟಲಿ ಹಾಲುಣಿಸಿ ಪೋಷಿಸಿದ್ರು. ಇದು ಇವರ ಪ್ರಾಣಿದಯೆಯನ್ನು ತೋರಿಸುತ್ತೆ.

ಈ‌ ಆನೆಮರಿಗಳಿಗಾಗಿಯೇ ಒಂದು ಆಟೋ, ಟ್ರಾಕ್ಟರ್ ನ್ನು ಗೊತ್ತುಪಡಿಸಿದ್ದ ಅವರು ಲೋಡ್ ಗಟ್ಟಲೇ ಕಬ್ಬು, ಹುಲ್ಲು, ಭತ್ತದ ಆಹಾರಗಳನ್ನು ನೀಡಿ ಸಾಕಿದ್ರು. ಆ ಆನೆಮರಿಗಳಿಗೆ ಮೃತ್ಯಂಜಯ, ಪೃಥ್ವಿರಾಜ್ ಹಾಗೂ ಪದ್ಮಜಾ ಅಂತ ನಾಮಕಾರಣ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದರು. ಅಷ್ಟೇ ಅಲ್ಲದೆ ಆಗಾಗ  ಆ ಆನೆಮರಿಗಳನ್ನು  ನೋಡ್ಕೊಂಡು ಬರ್ತಿದ್ರು.

ವಿಶಾಲಾಕ್ಷಿ ಅವರು ತಮ್ಮ ಮೇಲೆ ತೋರಿಸಿದ ತಾಯಿ ಪ್ರೀತಿ, ಕಾಳಜಿಯನ್ನು ಆ ಆನೆಗಳು ಕೂಡ ಮರೆತಿರಲಿಲ್ಲ. ನೋಡಲು ವರ್ಷ ಕಳೆದು ಅವುಗಳನ್ನು ಹೋದ್ರು ಕೂಡ ಅವು ಇವರನ್ನು ಗುರುತಿಸಿ, ಪ್ರೀತಿ ತೋರುತ್ತಿದ್ದವು.

RELATED ARTICLES

Related Articles

TRENDING ARTICLES